Front Matter-Kannada Book Dedication Collection | ಕನ್ನಡ ಪುಸ್ತಕಗಳ ಅರ್ಪಣೆಗಳ ಅಸಮಗ್ರ ಸಂಗ್ರಹ

ಅತ್ಮೀಯ ಓದುಗರೇ.. ಇದು ಕನ್ನಡ ಕೃತಿಗಳ ಅರ್ಪಣೆ-ಸಮರ್ಪಣೆ ಪುಟಗಳ ಅಸಮಗ್ರ ಸಂಗ್ರಹ. ಯಾವುದೇ ಪುಸ್ತಕ ಓದಲು ಆರಂಭಿಸುತ್ತಿದ್ದಂತೆ, ಮುಖಪುಟ, ಮುನ್ನುಡಿ, ಪರಿವಿಡಿ ಜೊತೆಗೆ ಅರ್ಪಣೆ ಪುಟ ಗಮನ ಸೆಳೆಯುತ್ತದೆ.

ಅರ್ಪಣೆ ಎಂಬುದು ಯಾವುದೇ ವ್ಯಕ್ತಿ, ವಿಷಯ ಸ್ಮರಿಸುವ ಪುಟವಲ್ಲ. ಇದಕ್ಕಾಗಿ ಕೃತಜ್ಞತಾ ಪುಟ ಇದ್ದೇ ಇರುತ್ತದೆ. ಸಾಹಿತಿಗಳು ತಮ್ಮ ಕೃತಿಯನ್ನು ಯಾರಿಗೆ, ಹೇಗೆ, ಏಕೆ ಆರ್ಪಿಸಿದ್ದಾರೆ ಎಂಬುದು ಕುತೂಹಲಕಾರಿ.

ಅರ್ಪಣೆ ಒಂದು ಪದ, ಒಂದು ವಾಕ್ಯ, ಒಂದು ಪ್ಯಾರ ಅಥವಾ ಒಂದೆರಡು ಪುಟಗಳಾದರೂ ಇರಬಹುದು, ವ್ಯಕ್ತಿ, ಸಮಾಜ, ಸಿದ್ಧಾಂತ, ವೃತ್ತಿ ಹೀಗೆ ತಮ್ಮ ಅಂತರಂಗಕ್ಕೆ ಆಪ್ತವೆನಿಸುವ ವಿಷಯ, ವಸ್ತುಗಳಿಗೆ ಸಮರ್ಪಿಸುವ ಧನ್ಯತಾ ಭಾವ ಇದರಲ್ಲಿ ಕಾಣಬಹುದು.

ಇಂಥ ಧನ್ಯತಾ ಪುಟಗಳ ಸಂಗ್ರಹದ ಪ್ರಯತ್ನ ಇದಾಗಿದೆ. ಮೊದಲಿಗೆ ಜ್ಞಾನಪೀಠ ಪ್ರಶಸ್ತಿ ವಿಜೇತ ಕೃತಿಗಳ ಅರ್ಪಣಾ ವಾಕ್ಯಗಳಿಂದ ಆರಂಭಿಸಿ, ಸಾಹಿತಿಗಳ ಹೃದಯದ ಮಾತುಗಳನ್ನು ಒಂದೆಡೆ ತರುವ ಪ್ರಯತ್ನಪಡಲಾಗಿದೆ.

1. ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ಆರಂಭದಲ್ಲಿ, ಕುವೆಂಪು ಅವರು ತಮ್ಮ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡಿ, ಕಾವ್ಯದ ಮೂಲ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.

ಶ್ರೀವೆಂಕಣ್ಣಯ್ಯನವರಿಗೆ

ಇದೊ ಮುಗಿಸಿ ತಂದಿಹೆನ್ ಈ ಬೃಹದ್ ಗಾನಮಂ
ನಿಮ್ಮ ಸಿರಿಯಡಿಗೊಪ್ಪಿಸಲ್ಕೆ, ಓ ಪ್ರಿಯ ಗುರುವೆ.
ಕರುಣಿಸಿಂ ನಿಮ್ಮ ಹರಕೆಯ ಬಲದ ಶಿಷ್ಯನಂ,
ಕಾವ್ಯಮಂ ಕೇಳ್ವೊಂದು ಕೃಪೆಗೆ ಕೃತ ಕೃತ್ಯನಂ
ಧನ್ಯನಂ ಮಾಡಿ. ನೀಮುದಯರವಿಗೈತಂದು
ಕೇಳಲೆಳಸಿದಿರಂದು. ಕಿರುಗವನಗಳನೋದಿ
ಮೆಚ್ಚಿಸಿದೆನನಿತರೊಳೆ ಬೈಗಾಯ್ತು. “ಮತ್ತೊಮ್ಮೆ
ಬರುವೆ. ದಿನವೆಲ್ಲಮುಂ ಕೇಳ್ವೆನೋದುವೆಯಂತೆ;
ರಾಮಾಯಣಂ ಅದು ವಿರಾಮಾಯಣಂ ಕಣಾ!”
ಎಂದು ಮನೆಗೈದಿದಿರಿ. ಮನೆಗೈದಿದಿರಿ ದಿಟಂ;
ದಿಟದ ಮನೆಗೈದಿದಿರಿ!

ಇದೊ ಬಂದಿರುವೆನಿಂದು
ಮುಗಿಸಿ ತಂದಿಹೆನಾ ಮಹಾಗಾನಮಂ. ಪಿಂತೆ
ವಾಲ್ಮೀಕಿಯುಲಿದ ಕಥೆಯಾದೊಡಂ, ಕನ್ನಡದಿ
ಬೇರೆ ಕಥೆಯೆಂಬಂತೆ, ಬೇರೆ ಮೈಯಾಂತಂತೆ,
ಮರುವುಟ್ಟುವಡೆದಂತೆ ಮೂಡಿದೀ ಕಾವ್ಯಮಂ
ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ
ಕೃಪೆಯಿಂದೆ.- ಪೂರ್ವದ ಮಹಾಕವಿಗಳೆಲ್ಲರುಂ
ನೆರೆದ ಸಗ್ಗದ ಸಭೆಗೆ ಪರಿಚಯಿಸಿರೆನ್ನನುಂ:
ಸಂಘಕೆ ಮಹಾಧ್ಯಕ್ಷರಲ್ತೆ ನೀಂ? ಕಿರಿಯನಾಂ
ಹಿರಿಯರಿಗೆ ಹಾಡುವೆನ್, ಕೇಳ್ವುದಾಶೀರ್ವಾದಂ!
ನುಡಿಯುತಿಹುದಾ ದಿವ್ಯ ಕವಿಸಭೆಗೆ ಗುರುವಾಣಿ, ಕೇಳ್
ಆಲಿಸಾ ಗುರುಕೃಪೆಯ ಶಿಷ್ಯ ಕೃತಿ ಸಂಕೀರ್ತಿಯಂ:
“ಬಹಿರ್ಘಟನೆಯಂ ಪ್ರತಿಕೃತಿಸುವಾ ಲೌಕಿಕ
ಚರಿತ್ರೆಯಲ್ತಿದು, ಅಲೌಕಿಕ ನಿತ್ಯ ಸತ್ಯಂಗಳಂ
ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನಂ ಕಣಾ,
ಶ್ರೀಕುವೆಂಪುವ ಸೃಜಿಸಿದೀ ಮಹಾಛಂದಸಿನ
ಮೇರುಕೃತಿ, ಮೇಣ್ ಜಗದ್ಭವ್ಯ ರಾಮಾಯಣಂ!
ಬನ್ನಿಮಾಶೀರ್ವಾದಮಂ ತನ್ನಿಮಾವಿರ್ಭವಿಸಿ
ಅವತರಿಸಿಮೀ ಪುಣ್ಯಕೃತಿಯ ರಸಕೋಶಕ್ಕೆ,
ನಿತ್ಯ ರಾಮಾಯಣದ ಹೇ ದಿವ್ಯ ಚೇತನಗಳಿರ!
ವಾಗರ್ಥ ರಥವೇರಿ, ಭಾವದಗ್ನಿಯ ಪಥಂ
ಬಿಡಿದು ಬನ್ನಿಂ, ಸಚ್ಚಿದಾನಂದ ಪೂಜೆಯಂ
ಸಹೃದಯ ಹೃದಯ ಭಕ್ತಿ ನೈವೇದ್ಯಮಂ ಕೊಂಡು
ಓದುವರ್ಗಾಲಿಪರ್ಗೊಲಿದೀಯೆ ಚಿತ್ಕಾಂತಿಯಂ!
ನಿತ್ಯಶಕ್ತಿಗಳಿಂತು ನೀಂ ಕಥೆಯ ಲೀಲೆಗೆ ನೋಂತು
ರಸರೂಪದಿಂದಿಳಿಯುತೆಮ್ಮೀ ಮನೋಮಯಕೆ,
ಪ್ರಾಣಮಯದೊಳ್ ಚರಿಸುತನ್ನಮಯಕವತರಿಸೆ;-
ಶ್ರೀ ರಾಮನಾ ಲೋಕದಿಂದವತರಿಸಿ ಬಂದು
ಈ ಲೋಕಸಂಭವೆಯನೆಮ್ಮ ಭೂಜಾತೆಯಂ
ಸೀತೆಯಂ ವರಿಸುತಾಕೆಯ ನೆವದಿ ಮೃಚ್ಛಕ್ತಿಯಂ
ಮರ್ದಿಸುತೆ, ಸಂವರ್ಧಿಸಿರ್ಪವೋಲ್ ಚಿಚ್ಛಕ್ತಿಯಂ;-
ರಾವಣಾವಿದ್ಯೆಯೀ ನಮ್ಮ ಮರ್ತ್ಯಪ್ರಜ್ಞೆ ತಾಂ
ತನ್ನ ತಮದಿಂ ಮುಕ್ತಮಪ್ಪುದು, ದಿಟಂ, ನಿಮ್ಮ
ದೀಪ್ಯ ದೈವೀ ಪ್ರಜ್ಞೆಯಮೃತ ಗೋಪುರಕೇರ್ವವೋಲ್!
ಓ ಬನ್ನಿಮವತರಿಸಿಮೀ ಮೃತ್ಕಲಾ ಪ್ರತಿಮೆಯೊಳ್
ಚಿತ್ಕಲಾ ಪ್ರಾಣಂ ಪ್ರತಿಷ್ಠಿತಂ ತಾನಪ್ಪವೋಲ್!

-ಶ್ರೀರಾಮಾಯಣ ದರ್ಶನಂ (ಮಹಾಕಾವ್ಯ)
-ಕುವೆಂಪು
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
ಸಿದ್ಧನ ವೆಂಕಟೇಶನ ವರ್ಗದ ಸಂತಾನ ಪರಂಪರೆಯಲ್ಲಿ ಮಂಜುನಾಥ ಪೈ ಎಂಬುವವರೊಬ್ಬರಿದ್ದರು. ಅವರಿಗೆ ಹತ್ತು ಗಂಡು ಮಕ್ಕಳು, ಆ ಹತ್ತು ಮಕ್ಕಳಿಗೂ ಹತ್ತು ಹತ್ತು ಮಕ್ಕಳು, ಅಂಥ ನೂರು ಮಕ್ಕಳಿಗೆ ತಂದ ಹೆಣ್ಣುಗಳೂ ಹೊರಗೆ ಕೊಟ್ಟ ಹೆಣ್ಣುಗಳೂ ವರ್ಷಕ್ಕೊಮ್ಮೆ ಈಯುವಾಗ ಬಾಣಂತನದ ಕೆಲಸಕ್ಕೆ ದೇಯಿ ಎಂಬ ಹೆಂಗಸು ಬರುತ್ತಿದ್ದಳು. ಕುಟುಂಬದ ಆ ತಲೆಮಾರಿನ ಮಕ್ಕಳ ಸಂಖ್ಯೆ ಸಾವಿರವಾದರೆ ಅದರಲ್ಲಿ ನೆಲಕ್ಕೆ ಬೀಳದಂತೆ ದೇಯಿ ಕೈಯಾರ ಹಿಡಿದುಕೊಂಡ ಮಕ್ಕಳ ಸಂಖ್ಯೆ ಏನಿಲ್ಲವೆಂದರೂ ಐನೂರಕ್ಕೆ ಕಡಿಮೆಯಾಗಲಾರದು. ಗಂಡಾಗಲೀ ಹೆಣ್ಣಾಗಲೀ, ಪ್ರಸವದ ಕೋಣೆಯಿಂದ ಹೊರಗೆ ಬರುವಾಗ ಅವಳ ಮೋರೆಯ ಮೇಲೆ ಮೂಡುವ ಮುಗುಳ್ನಗೆಯನ್ನು ನೋಡಿಯೇ ತಿಳೀಯಬೇಕು. ಹುಟ್ಟಿದ ಮಗುವಿನ ದೇಖದೇಖಿ, ಅದರ ಕೊಳಕು ಬಟ್ಟೆಗಳ ಒಗೆಯುವಿಕೆ, ಬಾಣಂತಿಗೆ ಎಣ್ಣೆ ಪೂಸಿ, ಸ್ನಾನ ಮಾಡಿಸುವುದು, ಮಗು ಅತ್ತರೆ, ತಾಯಿಗೆ ಜ್ವರ ಬಂದರೆ ಅವರ ಆರೈಕೆ, ಇವೆಲ್ಲ ದೇಯಿಯ ಕೆಲಸಗಳಲ್ಲಿ ಕೆಲವು. ಒಂದು ಬಾಣಂತನ ಮುಗಿದ ತಕ್ಷಣ ಇನ್ನೊಂದು. ಒಂದು ಮನೆಯಿಂದ ಇನ್ನೊಂದು ಮನೆಗೆ, ಒಮ್ಮೊಮ್ಮೆ ತಾಯಿ ಮಗಳ ಬಾಣಂತನಗಳು ಒಟ್ಟಿಗೇ, ಹುಟ್ಟಿದ ಮಗುವಿನ ಮುಖದ ಮೇಲೆ ಒಂದು ನಗು ಮೂಡಿತೋ ದೇಯಿ ಇನ್ನೊಬ್ಬಳ ಪ್ರಸವದಲ್ಲಿ ಪಾಲ್ಗೊಳ್ಳಲು ನಿಗೂಢದಂತೆ ಮಾಯವಾಗಿ ಬಿಡುತ್ತಿದ್ದಳು. ನಾನು ದೇಯಿಯನ್ನು ನೋಡುವಾಗ ಅವಳಿಗೆ ತುಂಬ ವಯಸ್ಸಾಗಿತ್ತಲ್ಲದೇ ನನ್ನಷ್ಟು ದೊಡ್ಡ ಮೊಮ್ಮಕ್ಕಳಿದ್ದರು. ಸ್ಥೂಲ ದೇಹ, ಅಗಲವಾದ ಮೋರೆ, ನೀರಸುಳಿಗಳಂತೆ ಸದಾ ಬೆಳಗುವ ಮುಗುಳ್ನಗೆ, ಗಜ್ಜುಗದಷ್ಟು ದೊಡ್ಡ ಕಣ್ಣುಗಳು, ಹುಟ್ಟಿದ ಮಗುವಿಗೆ ಬೆಚ್ಚನೆಯ ಆಸರೆ ಕೊಡುವ ದಪ್ಪನೆಯ ತೋಳುಗಳು, ಅಟ್ಟೆಕಾಲುಗಳು, ರವಿಕೆ ಇಲ್ಲದ ದಿನಗಳಲ್ಲಿ ನೀಲಿ ಕೈಮಗ್ಗದ ಸೀರೆಯೊಂದನ್ನು ಭುಜದ ಸುತ್ತ ಹೊದ್ದುಕೊಳ್ಳುತ್ತಿದ್ದರು. ಸಿದ್ದನ ವೆಂಕಟೇಶನ ವರ್ಗದ ಸಮಸ್ತ ಕೌಟುಂಬಿಕರೂ ಈ ಪ್ರಸವಭಾಗಿಗೆ ಋಣಿಯಾಗಿರಬೇಕು.

ಅಂಥ ಆ ದೇಯಿಗೆ ಈ ಕೃತಿ..ಅರ್ಪಣೆ

-ಸ್ವಪ್ನ ಸಾರಸ್ವತ (ಕಾದಂಬರಿ)
-ಗೋಪಾಲಕೃಷ್ಣ ಪೈ

ನನ್ನ ಭಾವನೆಗಳಿಗೆ, ವಿಚಾರಗಳಿಗೆ

‘ಬಿಸಿಲು, ನೀರು’ ಒದಗಿಸಿ, ಮಾಗಿಸಿ

ಅವುಗಳಿಗೊಂದು ಗಟ್ಟಿ ಆಕಾರ ಬರುವಂತೆ ಮಾಡಿದ

‘ಮೂಲ ಚೈತನ್ಯ’

ಅಣ್ಣ ಗೌರೀಶ ಕಾಯ್ಕಿಣಿ

ಅವರಿಗೆ

ಕೃತಜ್ಞತೆಯಿಂದ,

ಪ್ರೀತಿಯಿಂದ…ಅರ್ಪಣೆ

-ಕತೆಯಾದಳು ಹುಡುಗಿ (ಕಥಾ ಸಂಕಲನ)
-ಯಶವಂತ ಚಿತ್ತಾಲ
 
ಅವರ ನಿರೀಕ್ಷೆಯಂತೆ ಬದುಕದಿದ್ದರೂ

ಸಹಿಸಿಕೊಳ್ಳುತ್ತಲೇ ಇರುವ

ಅಪ್ಪ ಮತ್ತು ಅಮ್ಮನಿಗೆ…ಅರ್ಪಣೆ

-ಲೆಟ್ಸ್ ಬ್ರೇಕಪ್ (ಕಥಾ ಸಂಕಲನ)
-ಸಂಪತ್ ಸಿರಿಮನೆ
 
ಆತ್ಮೀಯರಾದ

ಕು. ಶಿ. ಹರಿದಾಸ ಭಟ್ಟರಿಗೆ

ಪ್ರೀತಿಯಿಂದ …ಅರ್ಪಣೆ

-ಆಕಾಶಕ್ಕೊಂದು ಕಂದೀಲು? (ಕಾದಂಬರಿ)
ವ್ಯಾಸರಾಯ ಬಲ್ಲಾಳ
ನನ್ನೆದೆಗೆ ಮೊದಲಕ್ಷರ ಬಿತ್ತಿದ, ಬದುಕಿನುದ್ದಕ್ಕೂ ಕಷ್ಟ

ಕೋಟಲೆಗಳನ್ನಷ್ಟೇ ಕಂಡು, ಸುಖ ಬರುವ ಹೊತ್ತಿಗೆ

ಅದನ್ನು ಅನುಭವಿಸಲಾರದ ಸ್ಥಿತಿಗೆ ತಲುಪಿದ

ನನ್ನಮ್ಮನಿಗೆ ಅಶ್ರುಬಿಂದುವಿನೊಂದಿಗೆ ಸಮರ್ಪಣೆ

-ಯಾವುದೀ ಹೊಸ ಒಗಟು? (ಕಾದಂಬರಿ)
-ಸಸಿಹಿತ್ಲು ಪಿ. ಸುಬ್ರಮಣ್ಯ
ನನ್ನ ನೆನಪುಗಳ ಬಹುಪಾಲು

ತುಂಬಿ ಹೋಗಿರುವ ನನ್ನ ಅಜ್ಜ-ಅಜ್ಜಿಯವರಾದ

ಶ್ರೀ ಶಂಕರಪ್ಪ-ಶ್ರೀಮತಿ ಪಾರ್ವತಮ್ಮ

ಹಾಗೂ

ಶ್ರೀ ಜನಾರ್ದನಯ್ಯ-ಶ್ರೀಮತಿ ಕಲ್ಯಾಣಮ್ಮ

ಇವರಿಗೆ ಅರ್ಪಣೆ

-ಎನ್ನ ಭವದ ಕೇಡು (ಕಾದಂಬರಿ)
-ಎಸ್ ಸುರೇಂದ್ರನಾಥ್
ಯಶೋದಾಗೆ…ಅರ್ಪಣೆ
-ಅಂತರಂಗದ ಅತಿಥಿ (ಕಾದಂಬರಿ)
-ಕೆ.ಟಿ ಗಟ್ಟಿ
ನನ್ನ ಹೆಸರಿನ ಮೊದಲರ್ಧ ನನ್ನ ಬಾಳಿನ ಮಿಗಿಲರ್ಧ ಆಗಿರುವ ಜ್ಯೋತಿ-ಗೆ…ಅರ್ಪಣೆ
-ನದಿ ನೆನಪಿನ ಹಂಗು (ಕಾದಂಬರಿ)
-ಜೋಗಿ
ಪಶ್ಚಿಮಘಟ್ಟದ ತಪ್ಪಲಿನಲ್ಲಿ

ಮಹಾಮಳೆಯಿಂದ ಅವಘಡಗಳು ಸಂಭವಿಸಿ,

ಹಳ್ಳಿಹಳ್ಳಿಗಳ ಬದುಕಿನ ಸಂಕೋಲೆಗಳೇ ತುಂಡರಿದಾಗ

ಮಾನವೀಯವಾಗಿ ಸ್ಪಂದಿಸಿದ ಎಲ್ಲಾ ಸಹೃದಯ ಮನಸ್ಸುಗಳಿಗೆ

ಮತ್ತು ಬದುಕು ಕಳೆದುಕೊಂಡ ಸಂತ್ರಸ್ಥ ಕುಟುಂಬಗಳಿಗೆ… ಅರ್ಪಣೆ

-ಒಂದು ಮಹಾಮಳೆಯ ಕಥೆ (ಕಾದಂಬರಿ)
-ನಾಗರಾಜ ಕೂವೆ
ಮುದ್ದಿನ ಮೊಮ್ಮಕ್ಕಳು

ವೈಶಾಲಿ ಹಾಗೂ ಅಭಿನಂದನ್

ಇವರಿಗೆ

ಪ್ರೀತಿ-ವಾತ್ಸಲ್ಯಗಳಿಂದ

-ಕೇಂದ್ರ ವೃತ್ತಾಂತ(ಕಾದಂಬರಿ)
-ಯಶವಂತ ಚಿತ್ತಾಲ

೧೦. ನನ್ನ ಬದುಕಿನ ಅಂಗಳದಲ್ಲಿ ದೀವಿಗೆಯಾಗಿ ಉರಿದು ಬೆಳಕು ನೀಡುವ ಇವರಿಗೆ

ಶ್ರೀ ಹಳೆಮನೆ ಭೀಮನಗೌಡ ಅಣ್ಣ

ಶ್ರೀ ಹಳೆಮನೆ ಬಸವರಾಜಪ್ಪ ಗುಂಡಪ್ಪ ಅಣ್ಣ

ಶ್ರೀ ಹಳೆಮನೆ ಸಿದ್ದರಾಮಪ್ಪ ಅಣ್ಣ

ಶ್ರೀ ಹಳೆಮನೆ ರಾಜಶೇಖರ (ಅಣ್ಣನ ಮಗ)

-ಸವಾರಿ (ಕಥಾ ಸಂಕಲನ)

-ಅಮರೇಶ ನುಗಡೋಣಿ

*****

೧೧. ತನ್ನವೇ ಜೀವ ಹಿಂಡುವ

ನೂರೆಂಟು ಹಳವಂಡಗಳ ನಡುವೆಯೂ

ನನ್ನ ಬದುಕು ಕಟ್ಟಲು ನಿಂತ ಹಠಯೋಗಿನಿಯಂತೆ

ನನ್ನೊಳಗಿನ ಕನಸಿನ ಬಲೂನಿಗೆ

ನಿರಂತರವಾಗಿ ಉಸಿರು ತುಂಬುತ್ತಾ

ನನ್ನೆಲ್ಲಾ ಯಮಯಾತನೆಗಳಿಗೆ

ತನ್ನ ಅಮೃತಹಸ್ತದಿಂದ

ಸದಾ ಜೀವಂತಿಕೆಯ ಮುಲಾಮು ಹಚ್ಚುತ್ತಾ

ಅನುದಿನವೂ ಪೀಡಿಸಿ ಕಾಡಿಸಿ ಕತೆಗಳನ್ನು ಬರೆಸಿ

ಓದಿ ತಿದ್ದಿ ತೀಡಿಸಿ

ಭರಪೂರ ಖುಷಿಪಡುವ

ನನ್ನ ಅತ್ಮಬಂಧುವಿಗೆ… ಅರ್ಪಣೆ

-ಕಾಟಿಹರದ ತಿರುವು (ಕಥೆಗಳು)

-ಕಾರ್ತಿಕಾದಿತ್ಯ ಬೆಳ್ಗೋಡು

****

೧೩. ಪ್ರಣಿತ ಮತ್ತು ಪ್ರಭವ-ರಿಗೆ

-ಗುಣ (ಕಾದಂಬರಿ)

-ಗುರುಪ್ರಸಾದ್ ಕಾಗಿನೆಲೆ

****

೧೪. ‘ನಮ್ಮ ತವಕ ತಲ್ಲಣಗಳಿಗೆ’

ದನಿಯಾದ

ಕೆ.ವಿ ಸುಬ್ಬಣ್ಣನವರ

ನೆನಪಿಗೆ

-ಪಿಂಜರ್(ಕಾದಂಬರಿ

-(ಅಮೃತಾ ಪ್ರೀತಮ್-ಕನ್ನಡಕ್ಕೆ: ಎಲ್.ಸಿ ಸುಮಿತ್ರಾ)

****

೧೫. ಈ ಕೃತಿ ಮೂಲಭೂತವಾದಿಗಳ ಉರಿದಿಟ್ಟಿಗೆ ಬಿದ್ದು

ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ರಕ್ಷಣೆಗೆ ಧಾವಿಸಿದ ಕನ್ನಡದ

ಪ್ರಗತಿಪರ ಮನಸ್ಸುಗಳಿಗೆ ಈ ಮರುಕೃತಿ ಅರ್ಪಿತ

-ಗಾಂಧಿ ಬಂದ (ಕಾದಂಬರಿ)

-ಎಚ್ ನಾಗವೇಣಿ

***

೧೬. ಮಾಲತಿಗೆ-ಪ್ರೀತಿಯಿಂದ

-ಶಿಕಾರಿ (ಕಾದಂಬರಿ)

-ಯಶವಂತ ಚಿತ್ತಾಲ

****

೧೭. ಸೊಸಾಕು ಕೊಬಾಯಾಶಿ

ಅವರ ನೆನಪಿಗೆ

ಸಮರ್ಪಿತ

-ತೊತ್ತೊ-ಚಾನ್ (ಸೃಜನಶೀಲ ಕಲಿಕೆ)

-ತೆತ್ಸುಕೊ ಕುರೊಯಾನಾಗಿ (ಅನುವಾದ: ವಿ. ಗಾಯತ್ರಿ)

*****

೧೮. ನಮ್ಮನ್ನೆಲ್ಲಾ ಪೊರೆವ ತಾಯಿ ಪಶ್ವಿಮ ಘಟ್ಟಕ್ಕೆ

-ದೇವಭೂಮಿಯ ಮಹಾಪತನ

-ವಿಜು ಬಿ (ಕನ್ನಡಕ್ಕೆ: ಕಾರ್ತಿಕಾದಿತ್ಯ ಬೆಳ್ಗೋಡು)

***

೧೯. ಬಯಲುಸೀಮೆಯ ಹಳ್ಳಿಗಾಡಿನ ಅನಕ್ಷರಸ್ಥ

ಹೆಣ್ಣುಮಕ್ಕಳ ಅನುಭವಗಳನ್ನು, ದಂತಕತೆಗಳನ್ನು

ಹಂಚಿಕೊಂಡ, ಯಾರನ್ನು ಕಂಡರೂ ತಟ್ಟನೆ

ಮರುಗುವ ಈ ಕತೆಯ ತಾಯಿ ಹೃದಯದ

‘ಗುಂಡಮ್ಮ’ ನಂತಹ ವಿಶಾಲ ಮನಸ್ಸಿನ

ನನ್ನಮ್ಮನಿಗೆ –ಪ್ರೀತಿಯಿಂದ ಅರ್ಪಣೆ

-ಯಾದ್ ವಶೇಮ್ (ಕಾದಂಬರಿ)

-ನೇಮಿಚಂದ್ರ

****

೨೦. ಲೋಕದ ಶೋಕವ ತಗ್ಗಿಸಿದ ಶಾಕ್ಯಮುನಿ

ಗೌತಮ ಬುದ್ಧ

ನಿನ್ನ ಚರಣಕಮಲಗಳಿಗೆ

-ರೇಷ್ಮೆ ಬಟ್ಟೆ (ಕಾದಂಬರಿ)

-ವಸುಧೇಂದ್ರ

***

೨೧. ‘ಅನಂತ’ವಾದ್ದನ್ನೆಲ್ಲಾ ‘ಅಂಗೈ’ನ ಚೌಕಟ್ಟಿನಲ್ಲಿ

ಅಡಗಿಸಿದ

ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರಿಗೆ

-ಯುಗೇ ಯುಗೇ (ಕಥಾ ಸಂಕಲನ)

-ಸತ್ಯಕಿ

****

೨೨. ನಮ್ಮಲ್ಲಿ ನಿಸರ್ಗದ ಅರಿವಿನ ದಿಗಂತವನ್ನು ವಿಸ್ತರಿಸಲು ನೆರವಾದ

ಮದುಮಲೈಕಾಡಿನ ಬುಡಕಟ್ಟು ಜನಾಂಗದ

ಚಿನ್ನ, ಬೊಮ್ಮ, ಕೃಷ್ಣ ಹಾಗೂ

ಬಂಡೀಪುರದ ಮೂರ್ತಿಯಂತೆ

ಅಜ್ಞಾತವಾಗುಳಿದಿರುವ

ಈ ನಾಡಿನ ಅಸಂಖ್ಯಾತ

ಜೀವ ವಿಜ್ಞಾನಿಗಳಿಗೆ…ಅರ್ಪಣೆ

-ಜೀವ ಜಾಲ

-ಕೆ. ಪುಟ್ಟಸ್ವಾಮಿ | ಕೃಪಾಕರ ಸೇನಾನಿ

****

೨೩. ನನ್ನ ತಂದೆ ಬಿತ್ತಿದ ವಿಜ್ಞಾನ ಬೀಜವನ್ನು

ಅವರಷ್ಟೆ ಕಾಳಜಿ ವಹಿಸಿ ನನ್ನಲ್ಲಿ ಬೆಳೆಸಿ

ಆ ಸಸಿಯ ಹಸಿರಲ್ಲಿ ತನ್ನೆಲ್ಲ ‘ಹಸಿವ’ನ್ನೂ ಮರೆಯುತ್ತಿದ್ದ.

ಮರೆಯಾಗಿ ಹೋದ

‘ಚಿಂಪು’ಗೆ

-ಸಸ್ಯ ಸಗ್ಗ

-ಡಾ. ಕೆ. ಎನ್ ಗಣೇಶಯ್ಯ

******

೨೪. ಭಾವಕೋಶದ ಭಾಗವೇ ಆದ

ಕೊಟ್ಟಿಗೆಹಾರ ಎಂಬ ಊರಿಗೆ

-ಕಣ್ಣ ಕನ್ನಡಿಯಲ್ಲಿ-೧

-ನಂದೀನ್ ಬಂಕೇನಹಳ್ಳಿ

***

೨೫. ಅಗಣಿತ ಪತಂಗಗಳಿಗೆ

ಅನಾಮಿಕ ಬಾಲ ಸನ್ಯಾಸಿಗಳಿಗೆ

-ಜಮುನಾ ಮಾನ್ಷನ್ (ಕಥಾ ಸಂಕಲನ)

-ಕಾರ್ತಿಕಾದಿತ್ಯ ಬೆಳ್ಗೋಡು

***

೨೬. ಈ ಪುಸ್ತಕಕ್ಕೆ ಪರೋಕ್ಷವಾಗಿ ಸ್ಫೂರ್ತಿ ನೀಡಿದ

ಹಾಗೂ

ತಾರಿಣಿ ಬರುವವರೆಗೂ ಅಣ್ಣನನ್ನು ನೋಡಿಕೊಂಡ

ಶ್ರೀಮತಿ ರಾಜೇಶ್ವರಿಗೆ

ಅಣ್ಣನನ್ನು ಕೊನೆಗಾಲದವರೆಗೂ ನೋಡಿಕೊಂಡ

ತಂಗಿ ತಾರಿಣಿಗೆ

ಅನಾರೋಗ್ಯದಲ್ಲೂ ಪದೇಪದೇ ಬಂದು ಕೈಲಾದಷ್ಟು

ನೋಡಿಕೊಳ್ಳುತ್ತಿದ್ದ ತಂಗಿ ಇಂದುಕಲಾಗೆ …ಅರ್ಪಣೆ

-ಅಣ್ಣನ ನೆನಪು

-ಕೆ.ಪಿ. ಪೂರ್ಣಚಂದ್ರ ತೇಜಸ್ವಿ

****

೨೭. ಪ್ರಕೃತಿ ಮತ್ತು ಪರಿಸರದ ಬಗ್ಗೆ

ನನಗೆ ಮೊದಲ ಕುತೂಹಲ

ಮೂಡಿಸಿದ

ನನ್ನ ತಂದೆಯವರಿಗೆ… ಅರ್ಪಣೆ

-ಪರಿಸರದ ಕಥೆ

-ಕೆ.ಪಿ. ಪೂರ್ಣಚಂದ್ರ ತೇಜಸ್ವಿ

****

೨೮. ಒಂದು ಗಂಟೆ ಬಾರಿಸದೆ

ನಾಲ್ಕಾಣೆ ಕಾಣಿಕೆ ಹಾಕದೆ

ತಲೆಮೇಲೆ ಹೂ ಪಕಳೆಯನ್ನೂ ಇಡದೆ

ನನ್ನೊಳಗೆ ದೇವರ ಮೂರ್ತಿಯಾಗಿರುವ

ಸಚಿನ್ ತೆಂಡೂಲ್ಕರ್‌ಗೆ…

-ತೇಜಸ್ವಿ ಬದುಕಿದ್ದಾರೆ

-ಕೀರ್ತಿ ಕೋಲ್ಗಾರ್

****

೨೯. ನನ್ನ ಜೀವಕೆ ಜೀವ

ತುಂಬಿ ಬದುಕು ಬಂಗಾರವಾಗಿಸಿದ

ನನ್ನ ತೇಜಸ್ವಿಗೆ

-ನನ್ನ ತೇಜಸ್ವಿ

-ರಾಜೇಶ್ವರಿ ತೇಜಸ್ವಿ

****

೩೦. ಗೆಳೆಯ ದಿ. ದೇವಣ್ಣ ಸುಬ್ರಾಯ ಪೈಗಳವರಿಗೆ

-ಚೋಮನ ದುಡಿ (ಕಾದಂಬರಿ)

-ಡಾ. ಶಿವರಾಮ ಕಾರಂತ

***

೩೧. ನನ್ನ ಪರಮ ಮಿತ್ರರಾಗಿದ್ದ ದಿವಂಗತ ಬಿ. ಎಸ್ ತುಂಗ–ಇವರಿಗೆ

-ಅಳಿದ ಮೇಲೆ (ಕಾದಂಬರಿ)

-ಡಾ. ಶಿವರಾಮ ಕಾರಂತ

***

೩೨. ಜನನ ಕಾರಣರಾಗಿ ಪಿತೃದೇವತೆಯೂ

ಗಾಯತ್ರೀ ಉಪದೇಶ ಕಾರಣದಿಂದ ಪ್ರಥಮ ಗುರುವೂ

ಆಗಿ

ಅಕ್ಕರೆಯಲ್ಲಿ ತಾಯಿ ತಂದೆ ಎರಡೂ ಆಗಿ ಸಾಕಿ ಬೆಳೆಸಿದ

ನನ್ನ ತಂದೆ

ಪೂಜ್ಯ ತ. ಸು. ರಾಮಸ್ವಾಮಯ್ಯನವರ

ಪರಮ ಪವಿತ್ರ ಚರಣಾರವಿಂದಗಳಲ್ಲಿ

ಅರ್ಪಿತವಾಗಿದೆ.

-ಸಿಡಿಲ ಮೊಗ್ಗು (ಕಾದಂಬರಿ)

-ತ. ರಾ. ಸು

***

೩೩. ಎನ್ನ ಮನ ಮನೆಗಳಿಗೆ ಬೆಳಕಾಗಿ ನೀ ಬಂದು

ಸಾಹಿತ್ಯ ಜೀವನಕ್ಕುಸಿರಾಗಿ ನಿಂದು

ಸಾವಿತ್ರಿನಾಮನ್ವರ್ಥಮಾಯ್ತಿಂದು

ಮೆಚ್ಚು ನಿನಗೀ ಕೃತಿಯು ಧನ್ಯನಹೆನಾಂ ಸಂದು

-ಅನ್ನಾ ಕರೆನಿನ (ಕಾದಂಬರಿ)

-ಲಿಯೋ ಟಾಲ್ಸ್ ಟಾಯ್ (ಅನುವಾದ: ದೇಜಗೌ)

****

೩೪. ಅನುಪಮಾ

ತೇಜಸ್ವಿನಿ-ಸೀಮಂತಿನೀ

–ಇವರಿಗೆ

-ಮೃತ್ಯುಂಜಯ (ಕಾದಂಬರಿ)

-ನಿರಂಜನ

****

೩೫. ಬಹುಶ್ರುತ ವಿದ್ವಾಂಸರೂ, ಆತ್ಮೀಯರೂ ಆದ

ಡಾ. ಸಿ ಎನ್ ರಾಮಚಂದ್ರನ್ ಅವರಿಗೆ

ಗೌರವಾದರಗಳೊಡನೆ.. ಅರ್ಪಣೆ

-ಹೇಮರೆಡ್ಡಿ ಮಲ್ಲಮ್ಮನ ಕಥೆಯು (ಕಾದಂಬರಿ)

-ಕುಂ ವೀರಭದ್ರಪ್ಪ

****

೩೬. ಕನ್ನಡ ಸಾಹಿತ್ಯ ಪರಿಷತ್ತಿನ ನೂತನ

ಅಧ್ಯಕ್ಷರು ಸನ್ಮಿತ್ರರು ಆದ

ಡಾ ಮನು ಬಳಿಗಾರ್ ಅವರಿಗೆ

ಆದರಾಭಿಮಾನದಿಂದ… ಅರ್ಪಣೆ

-ನಿಜಲಿಂಗ (ಕಾದಂಬರಿ)

–ಕುಂ ವೀರಭದ್ರಪ್ಪ

***

೩೭. ಹುಬ್ಬಳ್ಳಿ ಶಹರದ ಪ್ರಸಿದ್ಧ ವಕೀಲರೂ

ಪರಮಾಪ್ತರೂ ಆದ

ಸುರೇಶ ಕಿಣಿ

ಅವರಿಗೆ

-ಯಾಪಿಲ್ಲು (ಕಾದಂಬರಿ)

-ಕುಂ ವೀರಭದ್ರಪ್ಪ

****

೩೮. ನನ್ನ ಪ್ರೀತಿಯ ಪ್ರಾಂತದ ಪ್ರಪ್ರಥಮ ಜನಪರ ಕಲೆಕ್ಟರ್

ಸರ್ ಥಾಮಸ್ ಮನ್ರೋ ಅವರ ದಿವ್ಯ ಸ್ಮರಣೆಗೆ

-ಅರಮನೆ (ಕಾದಂಬರಿ)

-ಕುಂ ವೀರಭದ್ರಪ್ಪ

****

೩೯. ನನ್ನ ಬದುಕೆಂಬುವ

ಕನ್ನಡಿಯೊಳಗಿನ

ಅಗಣಿತ ಪ್ರತಿಬಿಂಬಗಳಿಗೆ

-ಗಾಂಧಿ ಕ್ಲಾಸು (ಆತ್ಮಕಥನ)

-ಕುಂ ವೀರಭದ್ರಪ್ಪ

****

೪೦. ಕನ್ನಡದ ಪುಲ್ಲೆನೆಗೆ ಪಾವನದ ಶ್ರೀತುಳಸಿ

ಎಂಬ ಕವಿವಾಣಿಯನ್ನೇ

ತಮ್ಮ ಬಾಳನ್ನು ನಡಸುವ ದೀಪ-ಕುಡಿಯಾಗಿಟ್ಟುಕೊಂಡು

ಹಗಲಿರುಳೂ ಕನ್ನಡ ನಾಡಿನ ಮೇಲ್ಮೆಗೆ ಶ್ರಮಿಸುತ್ತಾ,

ತಮ್ಮ ವೈಯಕ್ತಿಕ ಶೀಲ, ಶುದ್ಧತೆ, ಸಮತೆ, ದೂರದೃಷ್ಟಿಗಳಿಂದ

ರಾಜಕೀಯ ರಂಗದಲ್ಲಿ ದುಡಿಯುವವರೆಲ್ಲರಿಗೂ ಮಾದರಿಯಾಗಿ,

ಚಿತ್ರದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತರ ನಿಲ್ಲಿಸಲು

ತಮ್ಮ ಬಾಳನ್ನೇ ಮೀಸಲಾಗಿರಿಸಿರುವ

ದುರ್ಗದ ಗಂಡುಮೆಟ್ಟಿನ ಧೀರಪುತ್ರ

ನವ ನಿರ್ಮಿತ ಅಖಂಡ ಕರ್ಣಾಟಕದ

ಪ್ರಥಮ ಪ್ರಧಾನ ಮಾತ್ರ

ಪೂಜ್ಯ ಶ್ರೀ ಸಿದ್ಧವನಹಳ್ಳಿ ನಿಜಲಿಂಗಪ್ಪ

ನವರಿಗೆ ಪ್ರೀತಿ ಪುರಸ್ಸರವಾದ ಕಿರುಕಾಣಿಕೆ

-ವಿಜಯೋತ್ಸವ

-ತ. ರಾ. ಸು

***

೪೧. ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯವರ್ಯ-

ಪದವಾಕ್ಯಪ್ರಮಾಣಪಾರಾವಾರಪಾರೀಣ-

ಯಮನಿಯಮಾಸನಪ್ರಣಾಯಾಮ,–

ಪ್ರತ್ಯಾಹಾರಧಾರಣಾಧ್ಯಾನ,-

ಸಮಾಧ್ಯಷ್ಟಾಂಗಯೋಗಾನುಷ್ಠಾನನಿಷ್ಠ-

ತಪಶ್ಚಕ್ರವರ್ತ್ಯನಾದ್ಯವಿಚ್ಛಿನ್ನ-

ಶ್ರೀಶಂಕರಾಚಾರ್ಯಗುರುಪರಂಪರಾಪ್ರಾಪ್ತ-

ಷಡ್ದರ್ಶನಸ್ಥಾಪನಾಚಾರ್ಯ-

ವ್ಯಾಖ್ಯಾನಸಿಂಹಾಸನಾಧೀಶ್ವರ-

ಸಕಲನಿಗಮಾಗಮಸಾರಹೃದಯ-

ಸಾಂಖ್ಯತ್ರಯಾಪ್ರತಿಪಾದಕ-

ವೈದಿಕಮಾರ್ಗಪ್ರವರ್ತಕ-

ಸರ್ವತಂತ್ರಸ್ವತಂತ್ರಾಧಿರಾಜಧಾನೀ,-

ವಿದ್ಯಾನಗರಮಹಾರಾಜಧಾನೀ,-

ಕರ್ಣಾಟಕಸಿಂಹಾಸನಪ್ರತಿಷ್ಠಾನಾಚಾರ್ಯ-

ಋಷ್ಯಶೃಂಗಪುರವರಾಧೀಶ್ವರ-

ತುಂಗಭದ್ರಾತೀರವಾಸೀ-

ಶ್ರೀಮದ್ವಿದ್ಯಾಶಂಕರಪಾದಪದ್ಮಾರಾಧಕ-

ಶ್ರೀಮಜ್ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀ-

ಗುರುಕರಕಮಲಸಂಜಾತ-

ಶ್ರೀ ಜಗದ್ಗುರು ಶೃಂಗೇರೀ

ಶ್ರೀಮದಭಿನವವಿದ್ಯಾತೀರ್ಥ

ಮಹಾಸ್ವಾಮಿಗಳ

ದಿವ್ಯಚರಣಾರವಿಂದಗಳಲ್ಲಿ

ಭಕ್ತಿಪೂರ್ವಕ ಸಮರ್ಪಣೆ

-ನಾಲ್ಕು ‍X ನಾಲ್ಕು= ಒಂದು (ಕಾದಂಬರಿ)

-ತ. ರಾ. ಸು

***

೪೨. ನಮಗಾಗಿ ಉತ್ತು, ಬಿತ್ತಿ,

ವಲಸೆ ಹೋದ, ನೇಗಿಲಯೋಗಿ

ಚಿಕ್ಕಪ್ಪನಿಗೆ..ಅರ್ಪಣೆ

-ಶಿಲಾಕುಲ ವಲಸೆ (ಕಾದಂಬರಿ)

-ಡಾ. ಕೆ.ಎನ್ ಗಣೇಶಯ್ಯ

***

೪೩. ಬದುಕನ್ನೆಲ್ಲ ಅಣ್ಣನ ಕೈಲಿಟ್ಟು

ಕುರಿಗಳಲ್ಲಿಯೇ ಜೀವ ಇಟ್ಟು

‘ತಮ್ಮನೆಂದರೆ ಚೌಡಪ್ಪನಪ್ಪ’

ಎನ್ನುವಂತೆ ಬದುಕಿಹೋದ

ನನ್ನ ಚಿಕ್ಕಪ್ಪನಿಗೆ

-ಮಿಹಿರಾಕುಲ (ಕಥಾ ಸಂಕಲನ)

-ಡಾ. ಕೆ.ಎನ್ ಗಣೇಶಯ್ಯ

***

೪೪. ಚಿಂತಿಸಲು ಕಲಿಸಿದ

ನನ್ನ ತಂದೆಗೆ,

ನನ್ನದಾಗಿಸಿದ

ನನ್ನೂರು ಕೋಟಿಗಾನಹಳ್ಳಿಗೆ… ಅರ್ಪಣೆ

-ಭಿನ್ನ ಬಿಂಬ (ಲೇಖನಗಳು)

-ಡಾ. ಕೆ.ಎನ್ ಗಣೇಶಯ್ಯ

***

೪೫. ಚರ್ಚೆಗಳ, ಪ್ರಶ್ನೆಗಳ ದಾರಿಗೆ

ಕೈಹಿಡಿದು ನಡೆಸಿ,

ಉತ್ತರಗಳ ಹುಡುಕಾಟಕ್ಕೆ

ಏಕಾಂಗಿಯಾಗಿಸಿ

ಅಗಲಿದ ನನ್ನ ತಂದೆಗೆ.. ಅರ್ಪಣೆ

-ಮೂಕಧಾತು (ಕಾದಂಬರಿ)

-ಡಾ. ಕೆ.ಎನ್ ಗಣೇಶಯ್ಯ

*****

೪೬. ನಾನು ನಾಲ್ಕೈದು ವರ್ಷದವನಿದ್ದಾಗಲೆ

ತಿರುಪತಿ ಬೆಟ್ಟವನ್ನು ಕೈಹಿಡಿದು ಹತ್ತಿಸಿದ

ಇಂದು ಮರೆಯಾಗಿದ್ದರೂ ನನ್ನ ಕೈಬಿಡದೆ

ಇನ್ನೂ ನಡೆಸುತ್ತಿರುವ ನನ್ನ ತಂದೆಗೆ…ಅರ್ಪಣೆ

-ಸಿಗೀರಿಯ (ನೀಳ್ಗತೆಗಳು)

-ಡಾ. ಕೆ.ಎನ್ ಗಣೇಶಯ್ಯ

****

೪೭. ಚರ್ಚೆಯ ರುಚಿ

ಉಣಿಸಿದ ನನ್ನ ತಂದೆಗೆ

-ಕಲ್ದವಸಿ (ಕಥಾ ಸಂಕಲನ)

-ಡಾ. ಕೆ.ಎನ್ ಗಣೇಶಯ್ಯ

****

೪೮. ಕತೆಗಳ ಜೊತೆಗೇ ಬೆಳೆಸಿ

ಕಿವಿಹಿಂಡದೆ, ಕತೆಗಳಿಂದಲೇ ಈ ನನ್ನನ್ನಾಗಿಸಿ

ನನ್ನ ಕತೆ ಕೇಳದೆಯೇ ಕತೆಯಾಗಿಹೋದ

ನನ್ನ ತಂದೆಗೆ

-ಕರಿಸಿರಿಯಾನ (ಕಾದಂಬರಿ)

-ಡಾ. ಕೆ.ಎನ್ ಗಣೇಶಯ್ಯ

****

೪೯. ಬದುಕಿನುದ್ದಕ್ಕೂ ಇದೇ ನೋವು ಕಂಡ ನನ್ನಮ್ಮನಿಗೆ

-ರಾಜ್ ಲೀಲಾ ವಿನೋದ

-ರವಿ ಬೆಳಗೆರೆ

****

೫೦. ಮಾತಾ-ಪಿತೃಗಳಾದ

ದಿವಂಗತ ಶ್ರೀ ಎಸ್. ಕರಿಯಪ್ಪ

ದಿವಂಗತ ಶ್ರೀಮತಿ ಗೌರಮ್ಮ

ಇವರ ಪಾದಕಮಲಗಳಿಗೆ

ಈ ಕೃತಿ ಹೃದಯಪೂರ್ವಕವಾಗಿ

ಸಮರ್ಪಿಸುತ್ತಿದ್ದೇನೆ.

-ವೀರಪ್ಪನ್ ಡೆತ್ ವಾರೆಂಟ್

-ಎಸ್. ಕೆ ಉಮೇಶ್

****

೫೧. ಅಮ್ಮನಂತೆ ಸಲಹುತ್ತಿರುವ

ಸರೋಜಕ್ಕನಿಗೆ

ಅಕ್ಕರೆಯಿಂದ

-ಸಾವಿರ ಕಣ್ಣಿನ ನವಿಲು (ಕಥಾ ಸಂಕಲನ)

-ಚಂದ್ರಶೇಖರ ಆಲೂರು

***

೫೨. ಬಾಲ್ಯ ಕಟ್ಟಿಕೊಟ್ಟ ಸಂಡೂರಿಗೆ

ಬದುಕು ಕಟ್ಟಿಕೊಟ್ಟ ಬೆಂಗಳೂರಿಗೆ

-ನಮ್ಮಮ್ಮ ಅಂದ್ರೆ ನಂಗಿಷ್ಟ (ಲಲಿತ ಪ್ರಬಂಧ)

-ವಸುಧೇಂದ್ರ

***

೫೩. ಎಲ್ಲಾ

ಬುಚ್ಚಿಲಕ್ಷ್ಮಿ ಮತ್ತು ಅಪ್ಪದಾಸು ದಂಪತಿಗಳಿಗೆ

-ಮಿಥುನ

-ಶ್ರೀರಮಣ,(ವಸುಧೇಂದ್ರ ಅನುವಾದ)

***

೫೪. ನನಗೆ ಅನ್ನ ಅನುಭವ,

ವಿದ್ಯೆ ಮತ್ತು ಕನಸು

ಕಟ್ಟಿಕೊಟ್ಟ ನನ್ನ

ಬಳ್ಳಾರಿಯ ನೆಲಕ್ಕೆ

-ಮೈನಿಂಗ್ ಮಾಫಿಯಾ ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು

-ರವಿ ಬೆಳಗೆರೆ

****

೫೫. ಗೌರವಪೂರ್ವಕವಾಗಿ

ನನ್ನ ತಾಯಿ ಶ್ರೀಮತಿ ಕೆ. ಆರ್. ಮಂಜುಳ ರಾಜಗೋಪಾಲ್

ಹಾಗೂ

ತಂದೆಯವರಾದ ಶ್ರೀ ಕೆ.ವಿ ರಾಜಗೋಪಾಲ್

ಮತ್ತು

ನನ್ನ ಎಲ್ಲಾ ಕುಟುಂಬ ವರ್ಗದವರಿಗೆ

ನನ್ನ ಈ ಪ್ರಥಮ ಪ್ರಯತ್ನವನ್ನು ಅರ್ಪಿಸುತ್ತಿದ್ದೇನೆ.

-ಅನಾಮಿಕ

-ರವೀಂದ್ರ ಕೆ.ಆರ್

*****

೫೬. ನಾಟಕ ಮಾಡಿ

ಕೀರ್ತನೆ ಹಾಡಿ

ಕರ್ನಾಟಕ ಏಕೀಕರಣದ

ಕನಸು ಬಿತ್ತಿದ

ಕನ್ನಡಿಗರ

ಮನಸು ಕಟ್ಟಿದ

ಶಾಂತಕವಿಗಳಿಗೆ

ಅವರ

ಸರಸ ಕೋಲಾಹಲದ

ನೆನಪಿಗೆ

-ನಾಟಕ- ಕರ್ನಾಟಕ

-ರಾಮಕೃಷ್ಣ ಮರಾಠೆ

****

೫೭. ಚಿಕ್ಕಂದಿನಲ್ಲಿ ಪಾಸಾಗಿರೋದನ್ನ ಮಾರ್ಕ್ಸ್ ಕಾರ್ಡ್ ತೋರಿಸಿ ನಿರೂಪಿಸಿದ ನಂತರವಷ್ಟೇ ವರ್ಷಕ್ಕೆ ಒಂದೊಂದೇ ಸಿನಿಮಾ ತೋರಿಸುತ್ತಿದ್ದ ನನ್ನ ತಂದೆ-ತಾಯಿಗೆ

ಮದುವೆ ಮುಂಚೆ ಯಾವ ಕಥೆ ಹೇಳಿದ್ರೂ ಚೆನ್ನಾಗಿದೆ ಅಂತಿದ್ದ ಈಗ ಏನು ಹೇಳಿದ್ರೂ ಯಾರ ಹತ್ರ ಹೇಳ್ತೀ ಕಥೆ ಎನ್ನುವ ನನ್ನ ಹೆಂಡತಿಗೆ

ನಾನು ಕಥೆಗಾರ ಅಂತ ಗುರುತಿಸಿಕೊಂಡಿದ್ದರೂ ರಾತ್ರಿ ಮಲಗುವ ಮುನ್ನ್ ಅಮ್ಮನ ಕಥೆಯೇ ಬೇಕೆನ್ನುವ ನನ್ನ ಮಗಳಿಗೆ

ಕಷ್ಟ-ಸುಖದಲ್ಲಿ ಭಾಗಿಯಾದ ನನ್ನ ಸ್ನೇಹ ಮತ್ತು ಬಂಧು ಸಮೂಹಕ್ಕೆ

ಮುಖ್ಯವಾಗಿ ಕೊಂಡು ಓದುವ ನಿಮಗೆ

ಮತ್ತೂ ಮೊದಲಿಗೆ ನನ್ನ ಕೈ ಹಿಡಿದು ಇದೆಲ್ಲವನ್ನೂ ಬರೆಸಿದ ತಾಯಿ ಶಾರದೆಗೆ…!

-ಡೈರೆಕ್ಟರ್ಸ್ ಸ್ಪೆಷಲ್‌

-ಗುರುಪ್ರಸಾದ್

****

೫೮. ಕಣ್ಣೀರು ಕೆನ್ನೆಗಿಳಿಯುವ ಮೊದಲೇ ಹೆಗಲು ತಟ್ಟಿ ಸಂತೈಸುವ,

ನಾವಿದ್ದೇವೆ ಹೆದರಬೇಡ ಎಂದು ಧೈರ್ಯ ತುಂಬುವ ಗೆಳೆಯ-ಗೆಳೆತಿಯರು ಎಂಬ ಪ್ರೀತಿಯ ಮನಸ್ಸುಗಳಿಗೆ…

-ಅಪ್ಪ ಅಂದ್ರೆ ಆಕಾಶ

-ಎ. ಆರ್. ಮಣಿಕಾಂತ್

****

೫೯. ಅಪ್ಪನಂಥ ಧೈರ್ಯದ ಅಮ್ಮನಿಗೆ

ಅಮ್ಮನಂತೆಯೇ ಬೆಳೆಸಿದ ಅಪ್ಪನಿಗೆ

-ಅಮ್ಮ ಹೇಳಿದ ಎಂಟು ಸುಳ್ಳುಗಳು

-ಎ. ಆರ್. ಮಣಿಕಾಂತ್

****

೬೦. ಬೆವರು, ರಕ್ತ ಬಸಿದು ಎದೆಗೆ ಅಕ್ಷರ ನೀಡಿದ ಅಪ್ಪಯ್ಯ ಕರ್ಕಿ

ಶ್ರೀ ಕೆ.ಎಸ್ ಗೋಪಾಲ ನಾಯ್ಕ ಅವರಿಗೆ

-ಖಾನೇಷುಮಾರಿ

-ಶಿವಾನಂದ ಕರ್ಕಿ

***

೬೧. ವಿಮರ್ಶಕ, ಚಿಂತಕ, ಮಾರ್ಗದರ್ಶಿ ಇನ್ನಿಲ್ಲವಾದ ಅಣ್ಣ ಎಸ್. ಶ್ರೀಧರಮೂರ್ತಿಗೆ

-ನಾಲ್ಕು ಜನರಿಗೆ ನಮಸ್ಕಾರ (ಪ್ರಬಂಧಗಳು)

-ಗಂಗಾಧರ ಮೊದಲಿಯಾರ್

***

೬೨. ತಾಯಿ, ತಂದೆಯವರಿಗೆ

-ಸ್ವಾಮಿ ಮತ್ತು ಅವನ ಸ್ನೇಹಿತರು

– ಆರ್. ಕೆ ನಾರಾಯಣ್ (ಅನುವಾದ: ಎಚ್. ವೈ ಶಾರದಾ ಪ್ರಸಾದ್)

***

೬೩. ಅರ್ಪಣೆ ಭರತನಿಗೆ

-ಈ ತನಕದ ಕಥೆಗಳು

-ಅಬ್ದುಲ್ ರಶೀದ್

***

೬೪. ಹದಿನಾಲ್ಕರ ಹರೆಯದಲ್ಲಿ ಮದುವೆಯಾಗಿ, ಕಿಳಿಂಗಾರ್ ಕುಂಞಪ್ಪನ ಹೆಂಡ್ತಿಯಾಗಿ ಬ್ರಿಟಿಷರು ಅಲ್ಲಲ್ಲಿ ಕ್ಯಾಂಪ್ ಮಾಡುತ್ತಿದ್ದಂತಹ ಕಾಲಪರ್ವದಲ್ಲಿ ‘ಕಿಳಿಂಗಾರ್’ ಮನೆತನದ ಸೊಸೆಯಾದವರು. ನನ್ನ ಹೆತ್ತ

ತಾಯಿಗೆ ಈಗ ಎಪ್ಪತ್ತ ಮೂರು ವರ್ಷಗಳು. ನನ್ನ ಬರವಣಿಗೆಯನ್ನು ಮೊಟ್ಟ ಮೊದಲು ಪ್ರೋತ್ಸಾಹಿಸಿದ ತಾಯಿ ಲಕ್ಷ್ಮೀ(ಪೂವಕ್ಕೆ) ದೇವರಿಗೆ ಈ ಕಥಾ ಸಂಕಲನ ಅರ್ಪಿಸುತ್ತಿದ್ದೇನೆ.

-ಉತ್ಸವ (ಕಥಾ ಸಂಕಲನ)

-ವಿಠಲಗಟ್ಟಿ ಉಳಿಯ

***

೬೫. ನನ್ನ ಬರಹಗಳಿಗೆ ಚೆಂದದ ಅಂಗಿ ತೊಡಿಸಿ ನಿಮ್ಮ ಕೈಗಿಡುವ

ವಸುಧೇಂದ್ರ, ಪ್ರಕಾಶ್ ಕಂಬತ್ತಳ್ಳಿ, ಬಿ ಸುರೇಶ ಇವರ ಅಕ್ಕರೆಗೆ

-ಕಾಡುಹಾದಿಯ ಕತೆಗಳು ( ಕಥಾ ಸಂಕಲನ)

-ಜೋಗಿ

****

೬೬. ನನ್ನ ಬದುಕಿನಲ್ಲಿ ಬಂದಷ್ಟೇ ಅವಸರದಲ್ಲಿ

ತನ್ನ ಬದುಕಿಗೇ ಎರವಾಗಿ ಹೋದ

ನಾಗಭೂಷಣ ಹೆಗಡೆಯ ನೆನಪಿಗೆ

ಈ ಪುಸ್ತಕವನ್ನು ಅರ್ಪಿಸುತ್ತೇನೆ

-ಜಯಂತ ಕಾಯ್ಕಿಣಿ ಮೂರುಕ್ ಕಥೆಗಳು

-ಜಯಂತ ಕಾಯ್ಕಿಣಿ

****

೬೭. ಸೀಸನ್ ಪಾಸು, ಬಾಚಣಿಗೆ, ಬುತ್ತಿಯ ಪುಟ್ಟ ಚಪ್ಪಟೆ ಡಬ್ಬಿಯೊಂದಿಗೆ, ಫ್ಲಾಟ್ ಫಾರ್ಮಿನ ಮೇಲೆ ಓಡುತ್ತೋಡುತ್ತ ಇಕೋ ಇಂದಿನ ದೈನಿಕದ

ಲೋಕಲ್ ರೈಲೊಳಗೆ ಫಕ್ಕನೆ ಸೇರಿಕೊಂಡ ಮುಂಬಯಿಯ ಅನಾಮಿಕ

ನಿತ್ಯಯಾತ್ರಿಗೆ ಮತ್ತು ನಾಗರಾಜ ಹುಯಿಲ್‌ಗೋಳ್‌ಗೆ

-ಬೊಗಸೆಯಲ್ಲಿ ಮಳೆ

-ಜಯಂತ ಕಾಯ್ಕಿಣಿ

****

೬೮. ಕರ್ನಾಟಕದ ನೇಕಾರರಿಗೆ

-ದೇಸಿ ಜೀವನ ಪದ್ಧತಿ

-ಪ್ರಸನ್ನ

***

೬೯. ಮೊದಲನೆ ಆವೃತ್ತಿ ಮತ್ತು ಈ ಆವೃತ್ತಿಯ ನಡುವೆ

ನಮ್ಮಗಲಿರುವ ‘ಅಕ್ಷರ ಹೊಸ ಕಾವ್ಯ’ದ ಕವಿಗಳಾದ

ಅಡಿಗ, ರಾಮಾನುಜಮ್, ಕೃಷ್ಣ, ಚಿತ್ತಾಲ, ಪಾವೆಂ, ವಿ.ಜಿ. ಭಟ್ಟ

ಇವರ ನೆನಪಿಗೆ ಈ ೧೯೯೩ ರ ಸಂಗ್ರಹ

-ಅಕ್ಷರ ಹೊಸ ಕಾವ್ಯ

– ಸಂಪಾದಕರು-ಪಿ ಲಂಕೇಶ್

****

೭೦. ಬಿ.ವಿ ಕಾರಂತರಿಗೆ ಅರ್ಪಣೆ

-ಎರಡು ಏಕಾಂಕಗಳು

-ಚಿ. ಶ್ರೀನಿವಾಸರಾಜು

****

೭೧. ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ

ವಿನಾಯಕ ಕೃಷ್ಣಗೋಕಾಕರಿಗೆ

-ಬಕುಲದ ಹೂವುಗಳು (ಕವನ ಸಂಕಲನ)

-ಸುಬ್ಬಣ್ಣ ರಂಗನಾಥ ಎಕ್ಕುಂಡಿ

***

೭೨. ಯುಗಯೋಗಿ ಜಗದ್ಗುರು ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯೆಂಬ ನನ್ಮಾತ್ಮದ ತಾಯಿಗೆ…

ತಾಯಂತೆ ಸಲಹಿದ

ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರಿಗೆ

ನನ್ನ ಹಡೆದವರಿಗೆ…

-ಮಡಿಲ ನೂಲಿನ ಕೌದಿ

-ಗೋರವಿ ಆಲ್ದೂರು

****

೭೩. ಭಾವದೊಡಲಿಗೆ ಜೀವತುಂಬಿದ ನನ್ನ ದೇವರಿಗೆ

ಈ ಕವನ ಸಂಕಲನ ಅರ್ಪಣೆ

-ಜೀವನ್ಮುಖಿ (ಕವನ ಸಂಕಲನ)

-ಪ್ರಿಯಾ ಎಂ. ಕಲ್ಲಬ್ಬೆ

****

೭೪. ನನ್ನ ಅನೇಕ ಹುಚ್ಚಾಟಗಳಿಗೆ ಬೆನ್ನೆಲುಬಾಗಿ ನಿಂತ ನನ್ನ ಬಾಳ ಸಂಗಾತಿ ಶ್ರೀಮತಿ ಎನ್. ಸುಶೀಲ

ಬೆಳೆಯುವಾಗ ನನ್ನ ಹಲವು ಪ್ರಯೋಗಗಳಿಗೆ ಬಲಿ ಪಶುಗಳಾದ ನನ್ನ ಇಬ್ಬರು ಮಕ್ಕಳು ಡಾ. ಜ್ಯೋತ್ಸ್ನ ಮತ್ತು ಕುಮಾರಿ ಮೈತ್ರಿ

ತಂದೆ ಪ್ರೀತಿಯನ್ನು ಅರಸಿ ಬಂದು ನನಗೆ ಆಪ್ತರಾದ ಹಲವು ಪ್ರೀತಿಯ ಮಕ್ಕಳು, ಪ್ರೀತಿ ಸಿಗದೆ ಪರದಾಡುತ್ತಿರುವ ಅನೇಕ ಮಕ್ಕಳು

ಆತ್ಮಹತ್ಯೆಯ ದಾರಿಯಲ್ಲಿ ಸಾಗಿ ಆನಂತರ ನನ್ನ ಮಾತುಗಳಿಂದ ಸಾಂತ್ವನ ಹೊಂದಿ ಮತ್ತೆ ಬದುಕುವ ದಾರಿಗೆ ವಾಪಸ್ ಬಂದು ಜೀವನದ ಗುರಿಯತ್ತ

ಸಾಗುತ್ತಿರುವ ಏಳು ಜೀವಗಳು,

ಸಕಾಲದಲ್ಲಿ ನೆರವು ಸಿಗದೆ ಬದುಕನ್ನು ಅಂತ್ಯಗೊಳಿಸಿದ ನೂರಾರು ಜೀವಗಳು

ಇವರಿಗೆಲ್ಲ

-ಮಕ್ಕಳನ್ನು ಬೈಯುವುದು ಹೇಗೆ?

-ಆರ್ ನಾಗೇಶ್

***

೭೯. ನನ್ನೂರಿನ ನದಿ ಶಾಲ್ಮಲಿ,

ಮತ್ತವಳ ನಿರುದ್ವಿಗ್ನ ಅಲೆಗಳ ಮೇಲೆ ತೇಲುವ

ಮುಂಜಾವದ ಪುಷ್ಪರಂಗವಲ್ಲಿಯ ನೆನಪುಗಳಿಗೆ

-ಅಂಟಿಕೊಳ್ಳದ ಚಿತ್ರಗಳು (ಕವನ ಸಂಕಲನ)

-ನವೀನ್ ಭಟ್ ಗಂಗೋತ್ರಿ

***

೮೦. ನೆಲ ನಂಬಿ ಬದುಕುತ್ತಾ

ಉತ್ತು, ಬಿತ್ತಿ, ಬೆಳೆ ತೆಗೆದು

‘ಸತೊಂಭತ್ತು’ ಕೋಟೀ ಜೀವರಾಶಿಗಳಿಗೆ

ಅನ್ನದಾತರಾದ

ನಾಡಿನ ಸ್ವಾಭಿಮಾನ ಸಂಸ್ಕೃತಿಯ

ಸಂಕೇತವೆನಿಸಿರುವ ಎಲ್ಲಾ

ರೈತ ಸಮುದಾಯಕ್ಕೆ

ಮತ್ತು

ರೈತ ಸಂಸ್ಕೃತಿ ತತ್ವ, ಸಿದ್ಧಾಂತಗಳ

ನೆಲೆಯಲ್ಲಿ ಬದುಕಿ ಇಲ್ಲವಾದ ನನ್ನ

ಅಪ್ಪನಿಗೆ

ತುಂಬು ಹೃದಯದಿಂದ

-ಗಂಗಡಿಕಾರ ಒಕ್ಕಲಿಗರು

-ಡಾ. ನಲ್ಲೂರು ಪ್ರಸಾದ್

***

೮೧. ಭಂಗಿಗಳ ಬದುಕುವ ಹಕ್ಕುಗಳನ್ನು ಕಿತ್ತುಕೊಂಡ

ಕ್ರೂರ ವ್ಯವಸ್ಥೆಯ ವಿರುದ್ಧ ಮೈಮೇಲೆ ಮಲವನ್ನು

ಸುರಿದುಕೊಂಡು ಪ್ರತಿಭಟನೆ ಮಾಡಿದ ಹಾವೇರಿ

ಜಿಲ್ಲೆ, ಸವಣೂರಿನ ಭಂಗಿಗಳ ಪ್ರತಿಭಟನೆಯಿಂದ

ಇಡೀ ಮಾನವ ಕುಲವೇ ನಾಚಿಕೆಯಿಂದ

ತಲೆ ತಗ್ಗಿಸುವಂತಾಯಿತು.

ಇಂಥ ಘಟನೆಗಳು ಈ ಭೂಮಿ ಮೇಲೆ ಉಳಿಯದಂತೆ,

ಮುಂದುವರೆಯದಂತೆ

ಶ್ರಮಿಸುವ, ಹೋರಾಟ ಮಾಡುವ ಮಾನವಪ್ರೇಮಿಗಳಿಗೆ

-ಪರಂಪರೆಯ ನಕ್ಷತ್ರಗಳು (ಸಾಂಸ್ಕೃತಿಕ ಕಥನ)

ಸಂಪಾದಕ: ಲಕ್ಷ್ಮಣ್

***

೮೨. ಹೆಚ್ಚು ಕಮ್ಮಿ ಕಳೆದ ಮೂರು ದಶಕಗಳಿಂದ

ನನ್ನ ಕಷ್ಟದ ದಾರಿಯ ಜೊತೆಗಾರನಾಗಿ

ನಾನು ಏರ ಬಯಸಿದ ಬೆಟ್ಟಗಳ ಮೆಟ್ಟಿಲಾಗಿ

ನನ್ನನ್ನು ಕೈಹಿಡಿದ ಬದುಕಿನ ಬೆರಳುಗಳಾಗಿ

ನಾನು ಪಡೆದ ಪದವಿ, ಪ್ರಶಸ್ತಿಗಳ ಶಿಲ್ಪಿಯಾಗಿ

ನನ್ನೆಲ್ಲಾ ಯಶಸ್ಸುಗಳ ಹಿಂದಿನ ಶ್ರಮದ ಬೆವರಾಗಿ

ಎಲ್ಲಕ್ಕಿಂತ ಹೆಚ್ಚು ಬಾಂಧವ್ಯದ ಬೆನ್ನೆಲುಬಾದ

ಹಾಗೂ ನನ್ನ ನೆಲದ ನಕ್ಷತ್ರಗಳ ಪ್ರೀತಿಯ ಅಂಕಲ್ ಆದ

ಶ್ರೀ ಪ್ರಸಾದ್ ಅವರಿಗೆ

ಈ ಕೃತಿ ಕೃತಜ್ಞತಾಪೂರ್ವಕವಾಗಿ

ಸಮರ್ಪಿತವಾಗಿದೆ.

-ನೆಲದ ನಕ್ಷತ್ರಗಳ ನೆಂಟು (ವೃತ್ತಿ ಕಥಾನಕ)

-ಡಾ. ಶುಭದಾ ಹೆಚ್. ಎಸ್

***

೮೩. ದಟ್ಸ್‌ಕನ್ನಡ ಡಾಟ್ ಕಾಂನ ಶ್ಯಾಮಸುಂದರ್

ಹಾಗೂ ಸಿಬ್ಬಂದಿ ವರ್ಗಕ್ಕೆ

-ಕಿಲಿಮಂಜಾರೋ (ಪ್ರವಾಸ ಕಥನ)

-ಪ್ರಶಾಂತ್ ಬೀಚಿ

****

೮೪. ಶ್ರೀರಾಯನಗೌಡರು ಪಾಟೀಲ ತಲ್ಲೂರು

ಅವರ ಪುಣ್ಯಸ್ಮರಣೆಗೆ

-ಕಿತ್ತೂರು ಕಥನ

-ಡಾ. ಚೆನ್ನಕ್ಕ ಪಾವಟೆ

****

೮೯. ನನ್ನಲ್ಲಿ ಸಾಶಿತ್ಯ-ಸಂಗೀತ-ಕಲೆ

ಅಭಿರುಚಿಗಳನ್ನು ಬೆಳೆಸಿದ

ಅಕ್ಕ ಲಲಿತ

ಭಾವ ವೈ.ಕೆ ಪುಟ್ಟಸೋಮೇಗೌಡ (ಬಿ.ಎ.ಎಸ್)

ಅಧ್ಯಕ್ಷರು, ಕರ್ನಾಟಕ ಲೋಕಸೇವಾ ಆಯೋಗ

ಅವರಿಗೆ ಪ್ರೀತಿ ಗೌರವಗಳೊಂದಿಗೆ

ಈ ಕೃತಿಯನ್ನು ಅರ್ಪಿಸಿದ್ದೇನೆ.

-ಹಿಮಾಲಯ ಸಂಚಾರ (ಪ್ರವಾಸ ಕಥನ)

-ಹೆಚ್. ಆರ್ ಕೇಶವಮೂರ್ತಿ

*****

೯೦. ಕನ್ನಡ ಸಾಹಿತ್ಯ ಲೋಕಕ್ಕೆ ಈ ಕೃತಿ ಅರ್ಪಿತ

-ಕನ್ನಡ ಸಾಹಿತಿಗಳ ಮಾಹಿತಿ

-ಸಂಕಲನ: ನೀಲಾ ಪಾಟೀಲ

****

೯೧. ಕನ್ನಡದ ಆಸ್ತಿ ನೀವು ‘ಹಿರಿಯಣ್ಣ’ ಮಾಸ್ತಿ.

ಸನ್ನಡತೆ, ಸಜ್ಜನಿಕೆಗಳ ಸಾಕಾರಮೂರ್ತಿ.

ನನ್ನ ಮೈದಡವಿ ಹರಸಿದಿರಿ ‘ಯಶ ನಿನ್ನದಾಗಲೆಂದು’

ನಿಮ್ಮ ಮೊದಲ ಚಿತ್ರವನ್ನು ಕಂಡು

ಹೆಮ್ಮನದಿ ಮನದುಂಬಿ ಹೇಳಿದಿರಿ

ನಮ್ಮ ಸಾಹಿತಿಗಳೆಲ್ಲರ ಚಿತ್ರ ರಚಿಸೆಂದು ಅಂದು.

ನಿಮ್ಮಾಶಯ ಅದುವೆ ನನಗಾಣತಿಯಾಗಿ

ಒಮ್ಮನದಿ ಶ್ರಮಿಸಿ ಕಾಲುಶತಕಾವಧಿಯಲ್ಲಿ

ಸುಮ್ಮಾನದಿಂದಲೀ ಗ್ರಂಥ ನಿಮಗರ್ಪಿಸಿಹೆನಿಂದು

-ಚುಕ್ಕಿ ಚಿತ್ರಗಳಲ್ಲಿ ಶತ ಸಾಹಿತ್ಯ ಪ್ರತಿಭೆ

-ಮೋಹನ್ ವರ್ಣೇಕರ್

****

೯೨. ಮಧ್ಯ ಕರ್ನಾಟಕದ

ಕಲೆ, ಸಾಹಿತ್ಯ, ಸಂಗೀತದ

ಜೀವನಾಡಿಗಳಾದ

ಹೋರಾಟ ಕಲಾವಿದರಿಗೆ

-ಮಧ್ಯ ಕರ್ನಾಟಕದ ಜಾನಪದ ಐಸಿರಿ

-ಸಂಪಾದನೆ: ಇಂದಿರಾ ಕೃಷ್ಣಪ್ಪ

****

೯೩. ನಮ್ಮ ತಂದೆ

ಶಿವರಾಮ ಕಾರಂತ

ಮತ್ತು

ತಾಯಿ ಲೀಲಾ ಕಾರಂತ

ಅವರ ಅಮರ ನೆನಪಿಗೆ

-ಕಾರಂತರ ಸುಳಿಯಲ್ಲಿ

-ಉಲ್ಲಾಸ ಕಾರಂತ, ಮಾಲವಿಕಾ ಕಪೂರ, ಕ್ಷಮಾರಾವ್ (ಅನುವಾದ: ವಿಶ್ವೇಶ್ವರ ಭಟ್)

****

೯೪. ವೇದಾಂತ ತತ್ವಜ್ಞಾನವನ್ನು ಕುರಿತ

“ಗೋವಿಂದ ಭಾಷ್ಯ” ವ್ಯಾಖ್ಯಾನವನ್ನು ಅಷ್ಟು ಸೊಗಸಾಗಿ ನಿರೂಪಿಸಿದ ಶ್ರೀಲ ಬಲದೇವ ವಿದ್ಯಾಭೂಷಣ ಅವರಿಗೆ ಅರ್ಪಿತ

-ಭಗವದ್ಗೀತಾ ಯಥಾರೂಪ

-ಅನುವಾದ: ಪ್ರೊ ಎಲ್ ಎಸ್ ಶೇಷಗಿರಿರಾವ್

***

೯೫. ವಿಶ್ವ ವಿಖ್ಯಾತ ವಿದ್ವಾಂಸರು, ಶ್ರೇಷ್ಠ ಸಂಶೋಧಕರು, ಪ್ರಾಚ್ಯ ವಿದ್ಯಾವಿಶಾರದರು ಭಾರತೀಯ ಜ್ಞಾನಪೀಠ ಸಾಹಿತ್ಯಿಕ ಬಹುಮಾನದ ಬೃಹದ್ ನಿಧಿಯ ನಿರ್ಮಾಣಕ್ಕೆ ಪ್ರೇರಕರು ಶ್ರವಣಬೆಳಗೊಳದಲ್ಲಿ ಜರುಗಿದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಸಂತ ಸದೃಶ ಪವಿತ್ರಾತ್ಮರು ಅದ

ಡಾ. ಆದಿನಾಥ ನೇಮಿನಾಥ ಉಪಾಧ್ಯೆ (ಎಂ.ಎ.ಡಿ. ಲಿಟ್)

ಅವರ ದಿವ್ಯಸ್ಮೃತಿಗೆ

-ತೀರ್ಥಂಕರ ಮಹಾವೀರ

-ಮಿರ್ಜಿ ಅಣ್ಣಾರಾಯ

****

೯೬. ಕನ್ನಡದಲ್ಲಿ ದೇವರ ಪೂಜೆಯನ್ನು ನಡೆಸುವುದರ

ಆದ್ಯ ಪ್ರವರ್ತಕರೂ, ‘ಕನ್ನಡದ ಪೂಜಾರಿ’

ಎಂಬ ಅನ್ವರ್ಥಕ ಹೆಸರಿನಿಂದ

ಕನ್ನಡನಾಡಿನ ಉದ್ದಗಲ ಪ್ರಸಿದ್ಧರೂ,

ನನ್ನ ಆಪ್ತಮಿತ್ರರೂ ಆದ

ಶ್ರೀ ಹಿರೇಮಗಳೂರು ಕಣ್ಣನ್

ಅವರಿಗೆ ಗೌರವಪೂರ್ವಕವಾಗಿ ಈ ಗ್ರಂಥವನ್ನು ಸಮರ್ಪಿಸುತ್ತಿದ್ದೇನೆ.

-ಕನ್ನಡದಲ್ಲಿ ಶ್ರೀ ಸತ್ಯನಾರಾಯಣ ಪೂಜೆ

-ಶಿಕಾರಿಪುರ ಹರಿಹರೇಶ್ವರ

***

೯೭. ದಿ. ಶಿಂಗಾರಮ್ಮ ಮತ್ತು ರಾಮಸ್ವಾಮಿ ಐಯ್ಯಂಗಾರ್ ಅವರಿಗೆ ಸಮರ್ಪಣೆ

-ಶ್ರೀರಂಗ ರಂಗನಾಥಸ್ವಾಮಿ ವೈಭವ

-ಸಂಗ್ರಹ: ಜಿ. ಲಕ್ಷ್ಮೀನರಸಿಂಹನ್

****

೯೮. ನನಗೆ ತುಂಬ ಮಮತೆ ಮತ್ತು ಮಾರ್ಗದರ್ಶನವನ್ನು ನೀಡಿದ

ಕಂಚಿಯ ಪರಮಾಚಾರ್ಯ

ಶ್ರೀ ಚಂದ್ರಶೇಖರೇಂದ್ರಸರಸ್ವತಿ ಸ್ವಾಮಿಗಳ

ಸವಿ ಸ್ಮರಣೆಗೆ ಸಮರ್ಪಿತ

-ಕಂಚಿಯ ಪರಮಾಚಾರ್ಯರು

-ಎಂ.ವೈ ಘೋರ್ಪಡೆ, ಅನುವಾದ:ಎಸ್. ಆರ್ ರೋಹಿಡೇಕರ್

****

೯೯. ಈ ಕೃತಿಯನ್ನು ನನ್ನ ವೈದ್ಯಕೀಯ ಆತ್ಮೀಯ ಮಿತ್ರರಾದ ಡಾ. ಕೆ.ಕೆ ಪ್ರಸಾದ್

ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ಅರ್ಪಿಸುತ್ತಿದ್ದೇನೆ.

-ನಿಸರ್ಗ ಚಿಕಿತ್ಸೆ

-ಡಾ. ವಿ.ಎನ್ ಮೂರ್ತಿ
***

೧೦೦. ಮೊತ್ತ ಮೊದಲ ಬಾರಿಗೆ ಗಣಕಗಳನ್ನು ಪರಿಚಯಿಸಿ

ಅವುಗಳ ಬಗ್ಗೆ ಆಸಕ್ತಿ ಮೂಡಿಸಿದ ನನ್ನ ಮೊದಲ

ಕಂಪ್ಯೂಟರ್ ಮೇಷ್ಟ್ರು ಶ್ರೀ ಬಿ ಎಸ್ ವಿಶ್ವನಾಥ ಅವರಿಗೆ
ಈ ಪುಸ್ತಕವನ್ನು ಅರ್ಪಿಸುತ್ತಿದ್ದೇನೆ

-ವೆಬ್ ವಿಹಾರ

-ಟಿ.ಜಿ ಶ್ರೀನಿಧಿ

****

೧೦೧. ಒಂದಕ್ಷರ ಓದದೇ,

ಬದುಕಿನ ನೈಜಪಾಠ ಹೇಳಿಕೊಟ್ಟು,

ಉನ್ನತ ಶಿಕ್ಷಣ ಕಲಿಯಲು ಅವಕಾಶ

ಕಲಿಪಿಸಿಕೊಟ್ಟ ಅಮ್ಮ ಮತ್ತು ಅಪ್ಪಯ್ಯನಿಗೆ

-ಬಫರ್ ಜೋನ್ ಇದು ಯಾರ ಆವಾಸ? (ಕಾದಂಬರಿ)

-ರತ್ನಾಕರ ಗಡಿಗೇಶ್ವರ

****

೧೦೨. ರೆವರೆಂಡ್ ಫಾದರ್ ಆಸ್ಟಿನ್ ಡಿ’ಸೋಜಾ ಅವರಿಗೆ

-ಚುಚ್ಚದ ಜೇನು ಎಲ್ಲರಿಗೂ ಅಚ್ಚುಮೆಚ್ಚು (ಅನುಭವ ಕಥನ)

-ಶಿವರಾಂ ಪೈಲೂರು

***

೧೦೩. ಅನಿರೀಕ್ಷಿತವಾಗಿ, ಆಕಸ್ಮಿಕವಾಗಿ

ಅಪಘಾತದಲ್ಲಿ ಅಸುನೀಗಿ

ಅಸ್ತೂ

ಅಂದ ನನ್ನ ‘ಅಪ್ಪ’

ಅಡ್ವೊಕೇಟ್

ಬಿ.ಕೆ ಸುಬ್ಬರಾಯರ

ಆತ್ಮಕ್ಕೆ

ಅಶ್ರುಗಳೊಡನೆ

ಅರ್ಪಣೆ

-ಕನ್ನಡಕ್ಕೊಬ್ಬನೇ ಕೈಲಾಸಂ

-ಬಿ. ಎಸ್ ಕೇಶವರಾವ್

***

೧೦೪. ವಿಜಯ್ ಎಂಬ ಅದ್ಭುತ ಪ್ರತಿಭೆಯನ್ನು

ನನಗೆ ಪರಿಚಯಿಸಿದ ಹಿನ್ನೆಲೆ ಗಾಯಕಿ, ನಟಿ, ಸಂಗಾತಿ ಶರಣ್ಯಳಿಗೆ…

-ಅನಂತವಾಗಿರು (ಸಂಚಾರಿ ವಿಜಯ್ ಜೀವನ ಕಥನ)

-ಶರಣು ಹುಲ್ಲೂರು
****

೧೦೫. ನನ್ನ ಎಲ್ಲ ತಿಕ್ಕಲುತನವನ್ನು ಸಹಿಸಿಕೊಂಡು,

ಕಳೆದ ೨೫ ವರ್ಷಗಳಿಂದ ಬಾಳಸಂಗಾತಿಯಾಗಿ

ಕಾಪಾಡುತ್ತಿರುವ ‘ಅಮ್ಮ’ನಂಥಾ ಅಪರಂಜಿ ಗೆಳತಿ

ಗಾಯಿತ್ರಿಗೆ…

-ಗುರಿ ಹೆಗ್ಗುರಿ ಪಾತಾಳದಿಂದ ಆಕಾಶಕ್ಕೆ

-ಗಣೇಶ್ ಕಾಸರಗೋಡು

****

೧೦೬. ನನ್ನ ಏಳಿಗೆಗೆ ಸರ್ವ ರೀತಿಯಲ್ಲೂ ಉತ್ತೇಜಿಸಿ

ನನ್ನನ್ನು ಈ ಹಂತಕ್ಕೆ ತರಲು ಕಾರಣರಾದ

ಪೂಜ್ಯ ಮಾತಾಪಿತೃಗಳಿಗೆ

-ಸಾರ್ಥ-ಕತೆ (ಆತ್ಮ ಕಥನ)

-ಎಂ.ಎ ಜಯರಾಮ್ ರಾವ್

****

೧೦೭. ಜೀವದ ಜೊತೆಗೆ ತಿಳುವಳಿಕೆ ನೀಡಿ

ಒಬ್ಬ ಮನುಷ್ಯನನ್ನಾಗಿ ಮಾಡಿರುವ

ತಾಯಿ ಸುಲೋಚನ ಹಾಗೂ ತಂದೆ ಚಿಕ್ಕಣ್ಣ ದೇವರು

ವಿದ್ಯೆಯ ಜೊತೆಗೆ ಬುದ್ಧಿ ಹೇಳಿ

ಪ್ರಗತಿಯ ದಾರಿ ತೋರಿಸಿದ

ಚಿಕ್ಕಮ್ಮ ಪ್ರೇಮ ಹಾಗೂ ಚಿಕ್ಕಪ್ಪ ಷಡಾಕ್ಷರಿಯವರಿಗೆ

-ಲೇರಿಯೊಂಕ

-ಹೆನ್ರಿ ಆರ್ ಓಲೆ ಕುಲೆಟ್(ಅನುವಾದ: ಪ್ರಶಾಂಚ್ ಬೀಚಿ)

****

೧೦೮. ಅಮ್ಮ, ಅಯ್ಯ ನಿಮ್ಮ ಆಶೀರ್ವಾದದ ಬಲವೇ ನಮಗೆಲ್ಲಾ ಶ್ರೀರಕ್ಷೆ

ನಮ್ಮ ಪೂಜ್ಯ ಮಾತಾಪಿತರ ಚರಣ ಸ್ಮರಣೆಯೊಂದಿಗೆ ಈ ಕಿರು ಕಾಣಿಕೆ

-ಅಯುರ್ವೇದ ನಿತ್ಯ ಜೀವನ ಆರೋಗ್ಯ ಸೂತ್ರಗಳು

-ಡಾ. ರಂಗೇಶ್ ಪರಮೇಶ್ ಆರ್

-ಡಾ ಜಯಪ್ರಕಾಶ್ ನಾರಾಯಣ್

***

೧೦೯. ನನ್ನ ವಿದ್ಯಾಗುರುಗಳೂ,

ತಮ್ಮ ವಿದ್ವತ್ತು ಪ್ರತಿಭೆಗಳಿಂದ

ಸದ್ದುಗದ್ದಲವಿಲ್ಲದೆ ಕನ್ನಡ ಸಾರಸ್ವತ

ಸಂಪತ್ತನ್ನು ಹೆಚ್ಚಿಸಿರುವವರೂ,

ಮೈಸೂರು ವಿಶ್ವವಿದ್ಯಾಲಯದ

ಇಂಗ್ಲೀಷ್-ಕನ್ನಡ ನಿಘಂಟಿನ

ಪ್ರಧಾನ ಸಂಪಾದಕರೂ ಆದ

ಪ್ರೊ. ಎಂ ರಾಯರಾಯರಿಗೆ

ಭಕ್ತಿಯಿಂದ

-ಖಲೀಲ್ ಗಿಬ್ರಾನ್

-ಪ್ರಭುಶಂಕರ

***

೧೧೦. ಮಾತೃ ಸಮಾನರಾದ ನನ್ನ ಅತ್ತೆ

ದಿವಂಗತ ಮರಿಯಮ್ಮ ಹಜ್ಜುಮ್ಮ

ಹಾಗೂ

ನನ್ನ ಮಾವನವರಾದ

ದಿವಂಗತ ಹಾಜಿ ಎಂ. ಮೊ‍‍‍ಐದೀನಬ್ಬ

ಇವರಿಗೆ ಗೌರವಾದರಗಳೊಡನೆ

-ಹೊತ್ತು ಕಂತುವ ಮುನ್ನ

-ನಾಡೋಜ ಡಾ. ಸಾರಾ ಅಬೂಬಕ್ಕರ್

**

೧೧೧. ವಿಜಯ ಕರ್ನಾಟಕದಲ್ಲಿ

ಪ್ರಕಟವಾದ

ಬರಹಗಳನ್ನು

ಓದಿ ಮೆಚ್ಚಿದ

ಎಲ್ಲ ಓದುಗರಿಗೆ

ಈ ಪುಸ್ತಕ ಅರ್ಪಿತ

-ಅವಕಾಶ ಅಪಾರ

-ಟಿ. ಜಿ ಶ್ರೀನಿಧಿ

***

112. ಯುವ ಮನಸುಗಳನ್ನು ಬಡಿದೆಬ್ಬಿಸಿದ

ಹೊಸ ಕನಸು ಕಾಣಲು ಪ್ರೇರೇಪಿಸಿದ

ಭಾರತದೆಡೆಗೆ ಮತ್ತೊಮ್ಮೆ ಎಲ್ಲರೂ

ತಿರುಗಿ ನೋಡುವಂತೆ ಮಾಡಿದ

ಎಲ್ಲರ ಪ್ರೀತಿಯ

ದೇಶದ ಹೆಮ್ಮೆಯ

ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಮೇಷ್ಟ್ರಿಗೆ!

-ಚಂದ್ರಯಾನ

-ಶಿವಪ್ರಸಾದ್ ಟಿ. ಆರ್

***

113. ಪರಮಪೂಜ್ಯರು ನಮ್ಮ ತೀರ್ಥರೂಪರಾದ

ದಿವಂಗತ ಶ್ರೀ ನರಸಿಂಗರಾವ್ ಇವರ ಸ್ಮರಣಾರ್ಥವಾಗಿ

ಈ ಗ್ರಂಥವನ್ನು ಸಮರ್ಪಿಸಲಾಗಿದೆ

-ಕರಿಗಿರೀಶ ದೇವರಾಯನಪುರ್ಗ

-ಆದ್ಯ ರಾಮಾಚಾರ್ಯ
***

114. ಒಪ್ಪಪುಟ್ಟಿ ಪಲಯಲೆಕ ತೂವೊಂದು

ಮೋಕೆದ ಪೇರ ಕಡಲ್ ಡ್ ಮೀಪಾದ್

ದೇವೆರೆ ಪಾದ ಸೇರಿನ

ತಿಂಗಳೆ ರವೀಂದ್ರ ಹೆಗ್ಗಡ್ರೆನ

ಅಳಿದಾಂತಿ ನೆನೆಪುಗು

ಈ ಕಬಿತೊ ಒಪ್ಯಾವೆ

-ಪೊಡುಂಬ ತಿಂಮನ ಕಗ್ಗ

-ಡಿವಿಜಿ, ಅನುವಾದ: ಬಾಲಕೃಷ್ಣ ಶೆಟ್ಟಿ ಪೊಳಲಿ

***

115. ಶ್ರೀ ಡಬ್ಲ್ಯೂ. ಎಚ್. ಹನುಮಂತಪ್ಪ

ಇವರ ಸವಿನೆನಪಿಗಾಗಿ

-ವೇದ ವಾಙ್ಮಯ

ಮತ್ತು

ಉಪನಿಷತ್ತುಗಳು

-ಪ್ರೊ. ಸಾ.ಕೃ. ರಾಮಚಂದ್ರ ರಾವ್

**

116. ನನ್ನನ್ನು ಅತ್ಯಂತ ಸ್ನೇಹದಿಂದ ಕಾಣುತ್ತ

ಪ್ರೀತಿಯಿಂದ ಪ್ರೊತ್ಸಾಹಿಸುತ್ತ

ಅಭಿಮಾನದಿಂದ ಆದರಿಸಿದ

ಡಾ. ನಿರ್ಮಲಾ ದೇವಿ ಅವರಿಗೆ

-ಅಂತಃಕರಣ

-ಬಿ.ಎಸ್ ಕೇಶವರಾವ್

***

117. ಬದುಕಲ್ಲಿ ಕಂಡ ಬೆಳಕನ್ನು

ಅಕ್ಷರಕ್ಕಿಳಿಸಿ ಹಂಚಿಕೊಳ್ಳಲು

ಪ್ರೇರೇಪಿಸಿ, ಪ್ರೋತ್ಸಾಹಿಸಿದ

ಪತ್ರಕರ್ತ ಬಂಧುಗಳಿಗೆ

ಮತ್ತು

ಸನ್ಮಿತ್ರರಿಗೆ

-ನೋವು ನೀಗುವ ಕಾಯಕದಲ್ಲಿ ಕಂಡ ಬದುಕು ಬೆಳಕು

-ಡಾ. ಬಿ.ಟಿ ರುದ್ರೇಶ್

***

118. ಬೆಳವಾಡಿ ಗ್ರಾಮದ ದಿವಂಗತ ಹೆಚ್. ಎನ್. ತಿಪ್ಪೇಸ್ವಾಮಿ ಅವರಿಗೆ…

-ವೈದ್ಯನ ಹತ್ತು ಮುಖಗಳು

-ಡಾ. ಬಿ.ಟಿ ರುದ್ರೇಶ್

***

119. ಮನುಷ್ಯನನ್ನು ಕಾಲವು ಎಷ್ಟು ತರದಲ್ಲಿ ಕಾಡುತ್ತದೋ

ಎಷ್ಟು ತರದಲ್ಲಿ ಅವನನ್ನು ಪೀಡಿಸುತ್ತದೋ

ಮನಸ್ಸಿನ ಮೇಲೆ ಎಷ್ಟು ಅಧಿಪತ್ಯವನ್ನು ನಾನು ಸಂಪಾದಿಸುತ್ತಿದ್ದೆನೋ

ಆ ಎಲ್ಲಾ ಸ್ಥಿತಿಯನ್ನು ನಿವೀರ್ಯ ಮಾಡಲು

ನನ್ನನ್ನು ಘಟನೆ-ಸಂಘಟನೆಗಳ ಮಧ್ಯೆ ಕಾಲವು ನುಚ್ಚುನೂರು ಮಾಡುತ್ತಿತ್ತು

ಶಕ್ತ-ಅಶಕ್ತ…ಧರ್ಮ..ಅಧರ್ಮ

ಸತ್ಯ-ಅಸತ್ಯ…ಜಯ..ಅಪಜಯ

ಕಷ್ಟ-ಸುಖ..ಮಾನ–ಅವಮಾನ

ಜನನ-ಮರಣ ಎನ್ನುವ ದ್ವಂದ್ವಗಳ ಮಧ್ಯೆ ಜರುಗುವ ಸಂಘರ್ಷಣೆಯಲ್ಲಿ ಸಿಕ್ಕಿ ನುಚ್ಚು ನೂರಾದುದೇ

ನನ್ನ ಜೀವನ

ಇಂತಹ ಅದೃಷ್ಟಹೀನನ್ನು ಹಡೆದು, ಹೊಡೆದು, ಬಡಿದು ಒಂದು ಆಕೃತಿಯನ್ನಾಗಿ ಮಾಡಿ ನನಗೆ ವಿದ್ಯೆ ಕಲಿಸಿ, ನಾಲ್ಕಕ್ಷರ ಬರೆವಂತೆ ತಿದ್ದಿ ತೀಡಿ ಪ್ರೋತ್ಸಾಹಿಸಿದ ನನ್ನ ಗುರುಗಳೂ, ಪೂಜನೀಯರೂ, ನನ್ನ ಸ್ವರೂಪೋದ್ಧಾರಕರೂ ಆದ ನನ್ನ ದಿವಂಗತ ತಂದೆ ಗುರುರಾಜಪ್ರಿಯ ಇತ್ಯಾದ್ಯನೇಕ ಬಿರುದಾಂಕಿತ ಪಂಡಿತ್ ಹರಪನಹಳ್ಳಿ ಚಿಕ್ಕೇರೂರು ಗೋವಿಂದಾಚಾರ್ಯರ ಚರಣಾವಿಂದ ಗಳಲ್ಲಿ ನನ್ನ ಈ ಕಿರು ಹೊತ್ತಿಗೆಯನ್ನು ಅರ್ಪಿಸುತ್ತೇನೆ

-ಕಿರಣ್ ಬೇಡಿಯವರ ಆತ್ಮಕಥನ I dare ನನ್ನ ಸಾಹಸ

-ಪರ್ ಮೇಷ್ ಧಂಗ್ ವಾಲ್, ಕನ್ನಡಕ್ಕೆ: ಚಿಕ್ಕೇರೂರು ಧೀರೇಂದ್ರಾಚಾರ್ಯ

***

120. ಧಾರವಾಡ, ೧೯೭೩.

ಆಯೀ (ನನ್ನ ತಾಯಿ), ಬಾಪ್ಪಾ (ತಂದೆ) ಹಾಗೂ ನಾನು ಊಟ ಮಾಡುತ್ತಿದ್ದೆವು. ನನ್ನ ಚಿತ್ರ ‘ವಂಶವೃಕ್ಷ’ ಆಗಲೇ ತುಂಬ ಯಶಸ್ವಿಯಾಗಿ ಓಡಿ ಹಲವಾರು ಬಹುಮಾನಗಳನ್ನು ಗಳಿಸಿತ್ತು. ‘ಕಾಡು’ ಚಿತ್ರ ಮುಗಿಯುತ್ತ ಬಂದಿತ್ತು. ನಾನು ಪುಣೆಯ ಫಿಲ್ಮ್ ಹಾಗೂ ಟೆಲಿವಿಜನ್ ಸಂಸ್ಥಾನಕ್ಕೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಒಟ್ಟು ವಾತಾವರಣ ಆತ್ಮಾಭಿನಂದನೆಯಿಂದ ಬೀಗುತ್ತಿತ್ತು.

ಒಮ್ಮೆಲೆ ಆಯೀ ಬಾಪ್ಪಾನತ್ತ ನೋಡಿ, ‘ಮತ್ತು ನಾವು ಇವನು ಬೇಡ ಅಂತ ಅಂದುಕೊಂಡಿದ್ದೆವು!’ ಎಂದಳು.

ಈ ವಿಧಾನ ಅನಪೇಕ್ಷಿತವಾಗಿ ಬಂದರೂ ಬಾಪ್ಪಾಗೆ ತಕ್ಷಣ ಅದರ ಮೊನೆ ಚುಚ್ಚಿತು. ಮುಖ ಕೆಂಪೇರಿ ‘ಆಂ…ಹೂಂ…ನಿನ್ನ ಐಡಿಯಾ – ನನ್ನದಲ್ಲ. ಈಗ ಯಾಕೆ ಅದೆಲ್ಲ?’ ಎಂದು ಊಟದ ತಟ್ಟೆಯಲ್ಲಿ ಮುಖ ಮರೆಮಾಡಿದ.

ನನ್ನ ಕುತೂಹಲ ಕೆರಳಿತು. ಕೆದಕಿ ಕೇಳಿದೆ. ಆಗ ಆಯೀ ಹೇಳಿದಳು.

‘ನೀನು ಹೊಟ್ಟೆಯಲ್ಲಿದ್ದಾಗ, ನನಗೆ ಇನ್ನು ಮಕ್ಕಳು ಸಾಕು ಅನಿಸಿತು. ಮೂರು ಮಕ್ಕಳಿದ್ದಾರಲ್ಲ ಇನ್ನೂ ಯಾಕೆ? ಎಂದೆ. ಅದಕ್ಕಾಗಿ ಪುಣೆಯಲ್ಲಿಯ ಡಾ. ಮಧುಮಾಲತಿ ಗುಣೆ ಎಂಬ ಡಾಕ್ಟರ ಕ್ಲಿನಿಕ್ಕಿಗೆ ಹೋದೆವು’

‘ಮುಂದೆ ?’

‘ಆಕೆ ಬರತೇನೆ ಎಂದವಳು ಬರಲೇ ಇಲ್ಲ, ಸುಮಾರು ಒಂದು ತಾಸು ಹಾದಿ ಕಾಯ್ದು ಬೇಸತ್ತು ಬಂದು ಬಿಟ್ಟೆವು’

‘ಆಮೇಲೆ ?’

‘ಆಮೇಲೇನು? ಹೊರಳಿ ಆ ಕಡೆಗೆ ಹೋಗಲೇ ಇಲ್ಲ’

ನಾನು ಗರ ಬಡಿದವನಂತಾದೆ. ನನಗಾಐದು. ಆದರೂ ಮೂವತ್ತೈದು, ಆದರೂ ನಾನಿಲ್ಲದೆ ಈ ಜಗತ್ತು ಇರಬಹುದಾಗಿತ್ತೆಂಬ ಯೋಚನೆಗೆ ನಾನು ಮಂಕಾಗಿ ಕೂತೆ. ನಾನಿಲ್ಲದ್ದು ಹೇಗಿರತಿತ್ತು? ಕೆಲ ಹೊತ್ತು ಎಲ್ಲಿ ಇದ್ದೇನೆ ಎಂಬುದೆ ಎಚ್ಚರವಿಲ್ಲದೆ ಆ ಇರವಳಿಯನ್ನೇ ದಿಟ್ಟಿಸುತ್ತ ಕೂತೆ. ಮರುಗಳಿಗೆಗೆ ಇನ್ನೊಂದು ವಿಚಾರ ಹೊಳೆದು ದಿಗ್ಭ್ರಾಂತನಾಗಿ ಕೇಳಿದೆ.

‘ಹಾಗಾದರೆ ತಂಗಿ –ಲೀನಾ –ಆಕೆಯನ್ನು ಹೇಗೆ–?

ಆಯೀ ಅರೆನಾಚುತ್ತ. ‘ಆಯ್ಯೋ ಆ ವರೆಗೆ ನಾವು ಯೋಚನೆಯನ್ನೇ ಬಿಟ್ಟುಬಿಟ್ಟಿದ್ದೆವು’ ಎಂದು ಖೊಳ್ಳನೆ ನಕ್ಕಳು.

ಬಾಪ್ಪಾ ತಾಟಿನೊಳಗಿಂದ ದೃಷ್ಟಿಯನ್ನೇ ಎತ್ತಿರಲಿಲ್ಲ.

ಅಂದು ಆ ಡಾಕ್ಟರರು ಕೊಟ್ಟ ಮಾತಿಗೆ ಸರಿಯಾಗಿ ಕ್ಲಿನಿಕ್ಕಿಗೆ ಬಂದಿದ್ದರೆ, ಈ ಆತ್ಮ-ಕತೆಗಳು ಮಾತ್ರವಲ್ಲ, ಇದರ ಉತ್ತಮ ಪುರುಷನಾದ ನಾನೇ ಇಲ್ಲಿರುತ್ತಿರಲಿಲ್ಲ.

ಆದ್ದರಿಂದ ಇವೆಲ್ಲವುಗಳ ಅಸ್ತಿತ್ವಕ್ಕೆ ಕಾರಣೀಭೂತಳಾದ ಆ ಡಾ. ಮಧುಮಾಲತಿ ಗುಣೆಯ ನೆನಪಿಗೆ ಈ ಆತ್ಮ-ಕತೆಗಳನ್ನು ಅರ್ಪಿಸಿದ್ದೇನೆ.

-ಆಡಾಡತ ಆಯುಷ್ಯ (ಆತ್ಮ ಕತೆಗಳು)

-ಗಿರೀಶ ಕಾರ್ನಾಡ